ದಾವಣಗೆರೆ: ಸುಮಂತ್ ಶೈಲೇಂದ್ರ ನಟನೆಯ ‘ಗೋವಿಂದ ಗೋವಿಂದ’ ಚಲನಚಿತ್ರ ನ.26ರಂದುರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ದಾವಣಗೆರೆಯಲ್ಲಿ ತ್ರಿಶೂಲ್ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.
‘ಶೈಲೇಂದ್ರ ಪ್ರೊಡಕ್ಷನ್, ಎಲ್.ಜಿ. ಕ್ರಿಯೇಷನ್ಸ್ ಹಾಗೂ ರವಿ ಗರಣಿ ಪ್ರೊಡಕ್ಷನ್ ಮೂಲಕ ಶೈಲೇಂದ್ರಬಾಬು, ಕಿಶೋರ್ ಎಂ.ಕೆ., ಮಧುಗಿರಿ ಹಾಗೂ ರವಿ ಆರ್.ಗರಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾಮಿಡಿ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕವಿತಾ ಗೌಡ ಹಾಗೂ ಭಾವನಾ ಮೆನನ್ ನಟಿಸಿದ್ದಾರೆ’ ಎಂದು ಚಿತ್ರದ ನಿರ್ದೇಶಕ ತಿಲಕ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ವಿಜಯಪುರ ಹಾಗೂ ಮಧುಗಿರಿ, ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 6 ಹಾಡುಗಳ ಜೊತೆಗೆ ಎರಡು ಬಿಟ್ ಸಾಂಗ್ಗಳು ಇದ್ದು, ಚಿತ್ರದ ಮೊದಲ ಅರ್ಧ ಭಾಗ ಹಾಸ್ಯಭರಿತವಾಗಿದ್ದು, ಎರಡನೆಯ ಭಾಗ ಥ್ರಿಲ್ಲರ್ಗೆ ತಿರುಗಿ ಹಾಸ್ಯದಲ್ಲಿ ಕೊನೆಗೊಳ್ಳುತ್ತದೆ’ ಎಂದು ಮಾಹಿತಿ ನೀಡಿದರು.
‘ಚಿತ್ರದಲ್ಲಿ ವಿಜಯ್ ಚೆಂಡೂರು ಹಾಗೂ ಪವನ್ಕುಮಾರ್, ರೂಪೇಶ್ ಶೆಟ್ಟಿ ಭೂಮಿಕೆಯಲ್ಲಿ ಇದ್ದಾರೆ. ‘ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ’ ಎಂದು ಮಾಹಿತಿ ನೀಡಿದರು.
ಚಿತ್ರ ನಟ ಸುಮಂತ್ ಶೈಲೇಂದ್ರ ಮಾತನಾಡಿ, ‘ನಾನು ದಾವಣಗೆರೆಯಲ್ಲಿ ಹುಟ್ಟಿದ್ದು, ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ಇದೊಂದು ಕೌಟುಂಬಿಕ ಮನರಂಜನೆಯ ಚಿತ್ರವಾಗಿದೆ. ಯುವಕರಿಗೆ ಇಷ್ಟವಾಗುತ್ತದೆ’ ಎಂದು ಹೇಳಿದರು.
ಚಿತ್ರ ನಟಿ ಕವಿತಾಗೌಡ ಮಾತನಾಡಿ, ‘ಇದೊಂದು ಪ್ಯಾಕೇಜ್ ರೀತಿ ಇದ್ದು, ಹಾಸ್ಯ, ಥ್ರಿಲ್ಲರ್, ನೀತಿಕಥೆ ಇದೆ. ನಟ ಅಚ್ಚುತ್ರಾವ್ ಜೊತೆ ಒಂದು ಸಿನಿಮಾದಲ್ಲಿ ನಟಿಸಿದ್ದೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.