ADVERTISEMENT

ಹಿರಿಯ ನಟಿ ಪದ್ಮಾದೇವಿ ಇನ್ನಿಲ್ಲ 

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:31 IST
Last Updated 19 ಸೆಪ್ಟೆಂಬರ್ 2019, 19:31 IST
   

ಬೆಂಗಳೂರು:ಕನ್ನಡದಲ್ಲಿಸೆಟ್ಟೇರಿದ ಮೊದಲವಾಕ್ಚಿತ್ರ ‘ಭಕ್ತಧ್ರುವ’ದಲ್ಲಿಅಭಿನಯಿಸಿದ್ದ ನಟಿಎಸ್.ಕೆ. ಪದ್ಮಾದೇವಿ (95) ಗುರುವಾರ ನಿಧನರಾದರು.

ಅವರಿಗೆ ಪುತ್ರ, ನಿರ್ದೇಶಕ ನಂದಕಿಶೋರ್‌ ಇದ್ದಾರೆ. ಬೆಂಗಳೂರಿನವರಾದ ಅವರನ್ನು ಬಳ್ಳಾರಿ ರಾಘವಾಚಾರ್ಯರು ರಂಗಭೂಮಿಗೆ ಪರಿಚಯಿಸಿದರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ನಟಿಯಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಸ್ವಂತ ನಾಟಕ ಸಂಸ್ಥೆ ‘ಜನತಾಕಲಾ’ವನ್ನೂ ಕಟ್ಟಿದರು. ಸಿನಿಮಾ ಕ್ಷೇತ್ರಕ್ಕಿಂತಲೂ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದರು.

ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್, ಶೇಷಕಮಲ ಕಲಾ ಮಂಡಳಿ, ಯುನೈಟೆಡ್ ಆರ್ಟಿಸ್ಟ್ ಕಂಬೈನ್ಸ್, ಜನತಾ ಕಲಾ ಸಂಗೀತ ನಾಟಕ ಮಂಡಳಿ ಹೀಗೆ ಹಲವು ಕಂಪೆನಿಗಳಲ್ಲಿ ಅವರು ದುಡಿದಿದ್ದಾರೆ. ರಾಜ್ಯದಾದ್ಯಂತ ಸುಮಾರು 5 ಸಾವಿರಕ್ಕೂ ಹೆಚ್ಚು ರಂಗಪ್ರದರ್ಶನ ನೀಡಿದ್ದಾರೆ.

ADVERTISEMENT

ಚಿತ್ರರಂಗಕ್ಕೆ ಕಾಲಿಟ್ಟಾಗ ಪದ್ಮಾವತಿ ಅವರಿಗೆ ಒಂಬತ್ತರ ಹರೆಯ. 1934ರಲ್ಲಿ ಸೆಟ್ಟೇರಿದ ‘ಭಕ್ತಧ್ರುವ’ ಚಿತ್ರದಲ್ಲಿ ಸಖಿಯ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯ ಪಯಣ ಆರಂಭಿಸಿದ್ದರು. ಸಾಮಾಜಿಕ ಚಿತ್ರ ‘ಸಂಸಾರನೌಕೆ’ (1936) ಅವರಿಗೆಹೆಸರು ತಂದು
ಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದರು. ಜತೆಗೆ ಸ್ವತಃ ವೀಣೆ ನುಡಿಸಿ ಒಂದು ಹಾಡು ಹಾಡಿದ್ದರು. ‘ವಸಂತ ಸೇನ’, ‘ಜಾತಕ ಫಲ’, ‘ಮುಕ್ತಿ’, ‘ಅಮರ ಮಧುರ ಪ್ರೇಮ’, ‘ಸಂಕ್ರಾಂತಿ’ ಚಿತ್ರಗಳಲ್ಲಿ ನಟಿಸಿದ್ದರು.

ತಮಿಳಿನಲ್ಲಿ ‘ಗಂಗಾವತರಣ’, ತೆಲುಗಿನಲ್ಲಿ ‘ಸತ್ಯಭಾಮಾ’, ‘ಹರವಿಲಾಸಂ’ ಸಿನಿಮಾದಲ್ಲೂ ಅಭಿನಯಿಸಿದ್ದರು. ಆಕಾಶವಾಣಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಕನ್ನಡ, ತಮಿಳು, ಮಲಯಾಳದಲ್ಲಿ ಬಾನುಲಿ ನಾಟಕಗಳನ್ನು ನಿರ್ದೇಶಿಸಿದ ಹಿರಿಮೆ ಅವರದು.

ಪದ್ಮಾದೇವಿ ಅವರ ಮೊಮ್ಮಗ ಪ್ರದ್ಯುಮ್ನಸಿಂಗಪುರದಲ್ಲಿ ಉದ್ಯೋಗದಲ್ಲಿದ್ದು, ಅವರು ಬಂದ ಬಳಿಕ ಶುಕ್ರವಾರ ಸಂಜೆ 4 ಗಂಟೆಗೆ ಬನಶಂಕರಿಯ ವಿದ್ಯುತ್‌ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.