ಚಾಮರಾಜನಗರ: ಇತ್ತೀಚೆಗೆ ತೆರಕಂಡಿರುವ, ರಾಜ್ ಬಿ ಶೆಟ್ಟಿ ಅವರು ನಿರ್ದೇಶಿಸಿ ನಟಿಸಿರುವ ಗರುಡ ಗಮನ, ವೃಷಭ ವಾಹನ ಚಿತ್ರದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರು (ಶಿವ) ಕೊಲೆ ಮಾಡಿ ಹುಲಿ ನೃತ್ಯ ಮಾಡುವ ದೃಶ್ಯದ ಹಿನ್ನಲೆಯಲ್ಲಿ ಸೂಜುಗಾದ ಸೂಜಿ ಮಲ್ಲಿಗೆ.. ಎಂಬ ಮಲೆ ಮಹದೇಶ್ವರಸ್ವಾಮಿಯ ಜಾನಪದ ಹಾಡನ್ನು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಮಹದೇಶ್ವರ ಬೆಟ್ಟದ ವ್ಯಾಪ್ತಿಯವರೇ ಆದ ಯುವ ಸಾಹಿತಿ ಸ್ವಾಮಿ ಪೊನ್ನಾಚಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
‘ಗರುಡ ಗಮನ, ವೃಷಭ ವಾಹನ ಚಿತ್ರ ಯಶಸ್ವಿಯಾಗಲಿ.. ಆದರೆ, ಕೊಲೆ ಮಾಡಿ ಕುಣಿಯೋ ದೃಶ್ಯವೊಂದರಲ್ಲಿ ಆ ದೃಶ್ಯಕ್ಕೆ ಸಂಬಂಧವೇ ಇರದ, ಅಸಹಜವಾಗಿ ಮಹದೇಶ್ವರನ ಹಾಡು ಸೂಜುಗಾದ ಸೂಜಿ ಮಲ್ಲಿಗೆಯನ್ನು ಬಳಸಿಕೊಳ್ಳಲಾಗಿದೆ. ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೇ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ? ಜಾನಪದ ಅಂದ ತಕ್ಷಣ ಏನಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯು ಇರಲಿಲ್ಲವೇ? ಮಾರ್ಕೆಟ್ ಬೇರೆ ರೀತಿಯಲ್ಲೇ ಮಾಡಿಕೊಳ್ಳಬಹುದು. ಹೀಗಲ್ಲ. ಚಿತ್ರ ತಂಡ ಗಮನಿಸಬೇಕು’ ಎಂದು ಅವರು ಬರೆದಿದ್ದಾರೆ.
ಬರಹಗಾರ್ತಿ ಕುಸುಮಾ ಆಯರಹಳ್ಳಿ ಕೂಡ ತಮ್ಮ ಫೇಸ್ಬುಕ್ ಪುಟದಲ್ಲಿ, ‘ಕೊಂದು ಕುಣಿಯುವುದಕ್ಕೂ ಮಾದಪ್ಪನ ಸೂಜು ಮಲ್ಲಿಗೆಗೂ ಏನು ಸಂಬಂಧ? ಎಂಬ ಪ್ರಶ್ನೆಗೆ ಉತ್ತರ ಸಿಕ್ತಾ ಇಲ್ವ’ ಎಂದು ಪ್ರಶ್ನಿಸಿದ್ದಾರೆ.
ಇಬ್ಬರ ಪೋಸ್ಟ್ಗಳಿಗೂ ಪ್ರತಿಕ್ರಿಯಿಸಿರುವ ಹಲವು ಜಾಲತಾಣ ಬಳಕೆದಾರರು, ಆಗಿರುವ ತಪ್ಪನ್ನು ಚಿತ್ರತಂಡ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.