ADVERTISEMENT

ಬಿಬಿಸಿ ನ್ಯೂಸ್‌ನಲ್ಲಿ ಪುನೀತ್ ನಿಧನದ ಸುದ್ದಿ ಪ್ರಸಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2021, 13:35 IST
Last Updated 30 ಅಕ್ಟೋಬರ್ 2021, 13:35 IST
ಬಿಬಿಸಿ ನ್ಯೂಸ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಬಿಬಿಸಿ ನ್ಯೂಸ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ದೇಶ ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದೆ. ಬಿಬಿಸಿ ನ್ಯೂಸ್‌ನಲ್ಲಿ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿಯಾಗಿದೆ.

ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಓದಿದ ನಿರೂಪಕಿ, ಈ ದುಃಖವನ್ನು ಅವರ ಕುಟುಂಬ ಹೇಗೆ ಭರಿಸುತ್ತಿದೆ ಎಂದು ಲಂಡನ್ನಿನ ಸಿನಿಮಾ ವಿಮರ್ಶಕರನ್ನು ಕೇಳುತ್ತಾರೆ.

‘ನಾನು ಅವರ ಅಣ್ಣ ಖ್ಯಾತ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರ ಕುಟುಂಬ, ನಾನು ಸೇರಿದಂತೆ ಎಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಿನ್ನೆಯಷ್ಟೇ ಅಣ್ಣ ಮತ್ತು ಯಶ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ಬೆಳಗ್ಗೆ(ಅ.29) ಪುನೀತ್ ಅವರು ಇನ್ನಿಲ್ಲ ಎಂಬ ಸುದ್ದಿ ಎಲ್ಲರಿಗೂ ದಿಗ್ಭ್ರಮೆ ಹುಟ್ಟಿಸಿದೆ. ಅವರಿಗಿನ್ನೂ ಕೇವಲ 46 ವರ್ಷ ವಯಸ್ಸಾಗಿತ್ತು. ಪ್ರತಿಭಾನ್ವಿತ ನಟರಾಗಿದ್ದ ಅವರು 29 ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಸಾವಿರಾರು ಸಂಖ್ಯೆಯ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ" ಎಂದು ವಿವರಿಸಿದರು.

ADVERTISEMENT

ಹೌದು, ಆಸ್ಪತ್ರೆಗಳ ಮುಂದೆ ಜಮಾಯಿಸಿರುವ ಜನರನ್ನು ನೋಡಿದರೆ ಅವರ ಪ್ರಭಾವ ಹೇಗಿತ್ತು ಎಂಬುದು ಗೊತ್ತಾಗುತ್ತದೆ ಎಂದು ನಿರೂಪಕಿ ಹೇಳುತ್ತಾರೆ.

ಅದಕ್ಕೆ ಪ್ರತಿಕ್ರಿಯಿಸಿದ ವಿಮರ್ಶಕಿ, ಅವರು ಚಿಕ್ಕಂದಿನಿಂದಲೂ ಚಿತ್ರಗಳಲ್ಲಿ ನಟಿಸಿದ್ದಾರೆ. ಅಭಿಮಾನಿಗಳ ಜೊತೆಯೇ ಬೆಳೆದಿದ್ದಾರೆ. ಗಾಯಕರಾಗಿ ಗಮನ ಸೆಳೆದಿದ್ದಾರೆ. ಅವರ ತಂದೆ ಡಾ. ರಾಜ್‌ಕುಮಾರ್ ಎಲ್ಲರ ಪ್ರೀತಿಯ ನಟರಾಗಿದ್ದರು. ಅವರ ಜೊತೆಯೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೇವಲ ನಟರಾಗಿ ಅಲ್ಲ. ಸಮಾಜ ಸೇವೆಯಿಂದಲೂ ಜನರಿಗೆ ಹತ್ತಿರವಾಗಿದ್ದರು. ಅವರ ಸಾವಿನ ಸುದ್ದಿ ನನಗೆ ಈಗಲೂ ನಂಬಲಾಗುತ್ತಿಲ್ಲ ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.