ADVERTISEMENT

ಐತಿಹಾಸಿಕ ಸಿನಿಮಾಗಾಗಿ ಒಟ್ಟು ₹75 ಲಕ್ಷ ಬಂದಿದೆ: ರಾಧಿಕಾ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 10:52 IST
Last Updated 6 ಜನವರಿ 2021, 10:52 IST
ನಟಿ ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ    

ಬೆಂಗಳೂರು: ‘ಯುವರಾಜ್ (ಸ್ವಾಮಿ) ಅವರು ನನ್ನ ತಂದೆಯ ಸ್ನೇಹಿತರು. 17 ವರ್ಷಗಳಿಂದ ಅವರ ಪರಿಚಯವಿದೆ. ಸಿನಿಮಾವೊಂದರ ವಿಚಾರವಾಗಿ ಯುವರಾಜ್ ಅವರಿಂದ ₹15 ಲಕ್ಷ ಹಣ ನನ್ನ ಖಾತೆಗೆ ಬಂದಿತ್ತು’ ಎಂದು ನಟಿ ರಾಧಿಕಾ ಕುಮಾರಸ್ವಾಮಿ ತಿಳಿಸಿದರು.

ರಾಜಕಾರಣಿಗಳ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್‌ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ₹1.25 ಕೋಟಿ ವರ್ಗಾವಣೆಯಾಗಿರುವ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ನಟಿ ರಾಧಿಕಾ ಅವರು ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದರು.

ADVERTISEMENT

‘ಯುವರಾಜ್ ಅವರು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆ ಹೊಂದಿದ್ದಾರೆ. ಐತಿಹಾಸಿಕ ಸಿನಿಮಾ ಮಾಡುವ ಸಂಬಂಧ ನನ್ನೊಂದಿಗೆ ಚರ್ಚಿಸಿದ್ದರು. ಸಿನಿಮಾ ಮಾಡಲು ನಾನೂ ಒಪ್ಪಿದ್ದೆ. ಮುಂಗಡವಾಗಿ ₹15 ಲಕ್ಷ ನೀಡಿದ್ದರು. ಬೇರೆ ನಿರ್ಮಾಪಕರಿಂದ ₹60 ಲಕ್ಷ ಹಾಕಿಸಿದ್ದರು. ಆದರೆ, ಸಿನಿಮಾ ಅಗ್ರಿಮೆಂಟ್ ಆಗಲಿಲ್ಲ. ಇದಕ್ಕೂ ನನ್ನ ಸಹೋದರ ರವಿರಾಜ್‌ಗೂ ಸಂಬಂಧವಿಲ್ಲ’ ಎಂದು ಮಾಹಿತಿ ನೀಡಿದರು.

‘ಯುವರಾಜ್ ಅವರು ಜ್ಯೋತಿಷಿ. ಅವರು ನಮ್ಮ ಕುಟುಂಬದ ವಿಚಾರಗಳಲ್ಲಿ ಭವಿಷ್ಯ ನುಡಿದಿದ್ದರು. ಎಷ್ಟೋ ಬಾರಿ ಅವರು ಹೇಳಿದಂತೆ ನಮ್ಮ ಜೀವನದಲ್ಲಿ ಘಟನೆಗಳು ನಡೆದಿದೆ. ನಮ್ಮ ತಂದೆ ಸಾವಿನ ಸೂಚನೆಯೂ ನೀಡಿದ್ದರು. ಡಿಸೆಂಬರ್‌ನಲ್ಲಿ ನನಗೆ ಸಮಯ ಸರಿ ಇರುವುದಿಲ್ಲ ಎಂದಿದ್ದರು. ಆದರೆ, ಅವರಿಂದಲೇ ಈ ರೀತಿ ಸಮಸ್ಯೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದರು.

‘ಪೊಲೀಸರು ಅವರನ್ನು ಬಂಧಿಸಿದಾಗ ಆಶ್ಚರ್ಯಗೊಂಡಿದ್ದೆ. ಬಂಧನಕ್ಕೂ ಒಂದು ವಾರದ ಹಿಂದೆ ಅವರೊಂದಿಗೆ ಮಾತನಾಡಿದ್ದೆ. ಸಹೋದರ ರವಿರಾಜ್ ಅವರನ್ನು ಸಿಸಿಬಿ ವಿಚಾರಣೆ ನಡೆಸಿದೆ. ವಿಚಾರಣೆಗೆ ಕರೆದರೆ ನಾನೂ ಹಾಜರಾಗುತ್ತೇನೆ’ ಎಂದೂ ಹೇಳಿದರು.

ಹಣ ವರ್ಗಾವಣೆ ಸಂಬಂಧ ರಾಧಿಕಾ ಸಹೋದರ ರವಿರಾಜ್‌ ಅವರನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ‘ನನ್ನ ತಂಗಿಯ ಹಣದ ವ್ಯವಹಾರ ಬಗ್ಗೆ ಗೊತ್ತಿಲ್ಲ. ಯುವರಾಜ್‌ನೊಂದಿಗೆ ನಾನು ಯಾವುದೇ ವ್ಯವಹಾರ ನಡೆಸಿಲ್ಲ. ನನ್ನ ಖಾತೆಗೆ ಹಣ ಬಂದಿರುವುದು ಸುಳ್ಳು. ಮಾಹಿತಿ ಪಡೆಯುವ ಸಲುವಾಗಿ ಸಿಸಿಬಿಯವರು ವಿಚಾರಣೆಗೆ ಕರೆದಿದ್ದರು. ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದರು’ ಎಂದು ಸುದ್ದಿಗಾರರಿಗೆ ರವಿರಾಜ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.