ಕರ್ನಾಟಕದ ವಿವಿಧೆಡೆ ತಲೆದೋರಿರುವ ಪ್ರವಾಹದಿಂದ ಲಕ್ಷಾಂತರ ಜನರ ಬದುಕು ತೊಂದರೆಗೆ ಸಿಲುಕಿರುವ ಪರಿಣಾಮ ಆಗಸ್ಟ್ 15ರಂದು ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ನಟ ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 15 ರಾಘಣ್ಣ ಅವರ ಜನ್ಮ ದಿನ. ಅಂದು ಅಭಿಮಾನಿಗಳು ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ನಡೆಸಿರುವ ಬೆನ್ನೆಲ್ಲೆ ಸಂತ್ರಸ್ತರಿಗೆ ನೆರವು ನೀಡುವಂತೆ ಕೋರಿದ್ದಾರೆ.
ಮಳೆಯಿಂದ ನೆರೆ ಹಾವಳಿ ಸಂಭವಿಸಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಜನ– ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಅವರ ನೋವಿಗೆ ಮಿಡಿಯುವುದು ಎಲ್ಲರ ಹೊಣೆ. ಮಾಧ್ಯಮಗಳಲ್ಲಿ ಬಿತ್ತರವಾಗುವ ಅಲ್ಲಿನ ದೃಶ್ಯಾವಳಿ ನೋಡಿ ನನಗೆ ನೋವಾಗಿದೆ. ಹಾಗಾಗಿ, ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಅಂದು ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಬೇರೆ ಊರಿನ ದೇವಸ್ಥಾನಕ್ಕೆ ತೆರಳಿ ಸಂತ್ರಸ್ತರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ. ಯಾವುದೇ, ಕಾರಣಕ್ಕೂ ನನ್ನ ಮನೆಯ ಹತ್ತಿರ ಕೇಕ್, ಹೂವಿನ ಹಾರಗಳನ್ನು ತರಬಾರದು. ಅದೇ ಹಣವನ್ನು ಸಂತ್ರಸ್ತರ ಪರಿಹಾರಕ್ಕೆ ವಿನಿಯೋಗಿಸಬೇಕು. ಅವರ ಪರವಾಗಿ ದೇವರಲ್ಲಿ ಪ್ರಾರ್ಥಿಸಿದರೆ ಅದು ನನಗೆ ಸಂತೋಷ ನೀಡುತ್ತದೆ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.