
ರಘು ದೀಕ್ಷಿತ್ ಮತ್ತು ವಾರಿಜಶ್ರೀ
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಗಾಯಕಿ, ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ಶುಕ್ರವಾರ ಸಪ್ತಪದಿ ತುಳಿದಿದ್ದಾರೆ. ರಘು ದೀಕ್ಷಿತ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2019ರಲ್ಲಿ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.
ಕುಟುಂಬ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಘು–ವಾರಿಜಶ್ರೀ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಂಭ್ರಮದ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದಂಪತಿ ಹಂಚಿಕೊಂಡಿದ್ದಾರೆ.
ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ವಾರಿಜಶ್ರೀ ಅವರು ಏಳನೇ ವಯಸ್ಸಿನಲ್ಲಿ ತಮ್ಮ ಮೊದಲ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಕೊಟ್ಟಿದ್ದರು. ಜಾಕೋಬ್ ಕೊಲಿಯರ್ ಸಂಯೋಜಿಸಿರುವ ‘ಎ ರಾಕ್ ಸಮ್ವೇರ್’ ಹಾಡಿನ ಗಾಯನಕ್ಕೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೂ ನಾಮನಿರ್ದೇಶಗೊಂಡಿದ್ದರು.
‘ಫೋಕ್–ರಾಕ್’ ಸಂಗೀತ ಶೈಲಿಯಲ್ಲಿ ಜನಪ್ರಿಯತೆ ಪಡೆದಿರುವ ರಘು ದೀಕ್ಷಿತ್ ಅವರು ಅಪಾರ ಅಭಿಮಾನಗಳನ್ನು ಹೊಂದಿದ್ದಾರೆ. ‘ನಿನ್ನ ಪೂಜೆಗೆ ಬಂದೆ ಮಹಾದೇಶ್ವರಾ..’ ಹಾಡಿನ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ರಘು ಅವರು ಕನ್ನಡ ಸಂಗೀತ ಲೋಕಕ್ಕೆ ಹಲವು ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. ಗುಡುಗುಡಿಯಾ ಸೇದಿ ನೋಡು, ಲೋಕದ ಕಾಳಜಿ ಮಾಡುತ್ತಿನಂತಿ... ಹೀಗೆ ಹಲವು ಜನಪದ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ.
‘ಸಾಕು ಇನ್ನು ಸಾಕು’ ಆಲ್ಬಂ ಸಾಂಗ್ಗೆ ರಘು ದೀಕ್ಷಿತ್ ಮತ್ತು ವಾರಿಜಶ್ರೀ ಧ್ವನಿಯಾಗಿದ್ದರು.
ರಘು ದೀಕ್ಷಿತ್ ಅವರ ಮೇಲೆ ಗಾಯಕಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇದಾದ ಬೆನ್ನಲ್ಲೇ ಮಾಜಿ ಪತ್ನಿ ಮಯೂರಿ ಉಪಾಧ್ಯ ಅವರು ರಘು ದೀಕ್ಷಿತ್ ಅವರಿಗೆ ವಿಚ್ಛೇದನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.