ADVERTISEMENT

Sandalwood: ಮೂರ್ಖರ ಮಾತು ಕೇಳಿ ಸಬ್ಸಿಡಿ ನಿಲ್ಲಿಸಬೇಡಿ –ರಾಜೇಂದ್ರ ಸಿಂಗ್‌ ಬಾಬು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
ರಾಜೇಂದ್ರ ಸಿಂಗ್‌ ಬಾಬು 
ರಾಜೇಂದ್ರ ಸಿಂಗ್‌ ಬಾಬು    

ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರ ನಿರ್ದೇಶನದ ‘ವೀರ ಕಂಬಳ’ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಫೆ.27ರಂದು ತೆರೆಕಾಣಲಿದ್ದು, ಸಿನಿಮಾದ ಟ್ರೇಲರ್‌ ಅನ್ನು ಇತ್ತೀಚೆಗೆ ಸಂಗೀತ ನಿರ್ದೇಶಕ ಹಂಸಲೇಖ ಬಿಡುಗಡೆ ಮಾಡಿದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೇಂದ್ರ ಸಿಂಗ್‌ ಬಾಬು, ‘ಚಿತ್ರರಂಗ ಸಂಕಷ್ಟದಲ್ಲಿದೆ. ಸರ್ಕಾರ ಸಬ್ಸಿಡಿಯನ್ನು ತೆಗೆಯಲಿದೆ ಎನ್ನುವ ವದಂತಿ ಇದೆ. ಸಿದ್ದರಾಮಯ್ಯ ಅವರು ಸಬ್ಸಿಡಿ ತೆಗೆಯಲು ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ಮೂರ್ಖರ ಮಾತು ಕೇಳಿ ಸಬ್ಸಿಡಿ ನಿಲ್ಲಿಸಬೇಡಿ. ನಾನು ನಾಲ್ಕು ಮನೆ ಕಳೆದುಕೊಂಡಿದ್ದೇನೆ, ರವಿಚಂದ್ರನ್‌ ಐದು ಮನೆ ಕಳೆದುಕೊಂಡಿದ್ದಾರೆ. ಹೀಗೆ ಮನೆ ಕಳೆದುಕೊಳ್ಳುತ್ತಾ ಹೋಗಬೇಕು. ಚಿತ್ರರಂಗವನ್ನು ಉದ್ಯಮ ಮಾಡುವುದರಿಂದ ಪ್ರದರ್ಶಕರಿಗಷ್ಟೇ ಸಹಾಯವಾಗಲಿದೆ. ಸಬ್ಸಿಡಿ ನಿಲ್ಲಿಸಿದರೆ ಗಿರೀಶ ಕಾಸರವಳ್ಳಿ, ಶೇಷಾದ್ರಿ, ಬರಗೂರು ರಾಮಚಂದ್ರಪ್ಪ, ನಾಗಾಭರಣ ಮುಂತಾದವರು ಹೊಸ ಯೋಚನೆಗಳನ್ನೇ ನಿಲ್ಲಿಸಿಬಿಡುತ್ತಾರೆ’ ಎಂದರು.      

‘ನಾನು ಸದಾ ಹೊಸತನವನ್ನೇ ಹುಡುಕುತ್ತಿರುತ್ತೇನೆ. ಬೆಂಗಳೂರು ಕಥೆಗಳನ್ನೇ ಮಾಡಿಕೊಂಡು ನಾವು ಕರ್ನಾಟಕವನ್ನು ಮರೆಯುತ್ತಿದ್ದೇವೆ. ಬೆಂಗಳೂರಿನ ವ್ಯಾಮೋಹ ಬಿಟ್ಟು ಹೊರಗೆ ಹೋದರೆ ಒಳ್ಳೊಳ್ಳೆಯ ಕಥೆಗಳು ಸಿಗುತ್ತವೆ. ನಮ್ಮ ಮಣ್ಣಿನ ಕಥೆಯೇ ಇಂದು ಚಿತ್ರಮಂದಿರಗಳಲ್ಲಿ ಓಡುತ್ತವೆ. ಪ್ಯಾನ್‌ ಇಂಡಿಯಾ ಕಥೆಗಳು ಓಡಲ್ಲ’ ಎಂದರು. 

ADVERTISEMENT

ಈ ಸಿನಿಮಾವನ್ನು ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಆರ್. ಗಿರಿ ಛಾಯಾಚಿತ್ರಗ್ರಹಣ, ಮದನ್ - ಹರಿಣಿ ನೃತ್ಯ ನಿರ್ದೇಶನವಿದೆ. ಆದಿತ್ಯ, ಪ್ರಕಾಶ್ ರಾಜ್‌, ರವಿಶಂಕರ್, ಶೋಭರಾಜ್, ನವೀನ್ ಡಿ ಪಡೀಲ್, ಗೋಪಿನಾಥ್ ಭಟ್, ರಾಧಿಕಾ ಚೇತನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.