
ನಟ ಸಾಧು ಕೋಕಿಲ ಹಾಗೂ ರಾಜು ತಾಳಿಕೋಟೆ
ಚಿತ್ರ: ಇನ್ಸ್ಟಾಗ್ರಾಮ್
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (62) ಅವರು ಅ.13ರಂದು ತೀವ್ರ ಹೃದಯಾಘಾತದಿಂದ ನಿಧನರಾದರು. ರಾಜು ತಾಳಿಕೋಟೆ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಅದರಲ್ಲೂ ನಟ ಸಾಧು ಕೋಕಿಲ ಆತ್ಮೀಯ ಗೆಳೆಯನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ನಟ ಸಾಧು ಕೋಕಿಲ ಅವರು ಸಾಮಾಜಿಕ ಮಾಧ್ಯಮದಲ್ಲಿ ರಾಜು ತಾಳಿಕೋಟೆ ಜೊತೆಗೆ ಫೋಟೊವನ್ನು ಕ್ಲಿಕ್ಕಿಸಿಕೊಂಡು ‘ನನ್ನ ಆತ್ಮೀಯ ಗೆಳೆಯ ಸಹನಟ ರಾಜು ತಾಳಿಕೋಟೆ ರವರ ಅಗಲಿಕೆಯಿಂದ ಮನಸ್ಸಿಗೆ ತುಂಬ ದುಃಖ ತಂದಿದೆ. ಉತ್ತರ ಕರ್ನಾಟಕದ ರಂಗಭೂಮಿ ಮತ್ತು ಸಿನಿಮಾ ಲೋಕದ ಅತ್ಯುತ್ತಮ ಕಲಾವಿದನಾಗಿ ಅವರ ಕಲಾ ಸೇವೆಯ ಕೊಡುಗೆ ಅಪಾರ. '90' ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದನ್ನು ಎಂದಿಗೂ ಮರೆಯಲಾಗದು. ನಿಮ್ಮ ಕಲಾ ಸೇವೆಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದುಕೊಂಡಿದ್ದಾರೆ.
ನಟ ಸಾಧು ಕೋಕಿಲ ಹಾಗೂ ರಾಜು ತಾಳಿಕೋಟೆ
ಚಲನಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿದ್ದ ರಾಜು ತಾಳಿಕೋಟೆ ಅವರಿಗೆ ಅ.12ರ ರಾತ್ರಿ ತೀವ್ರ ಹೃಯಾಘಾತವಾಗಿತ್ತು. ತಕ್ಷಣ ಅವರನ್ನು ಮಂಗಳೂರು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಅ.13 ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾದರು. ರಾಜು ತಾಳಿಕೋಟೆ ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆಯವರಾಗಿದ್ದರು. ಇತ್ತೀಚೆಗೆ ರಂಗಾಯಣ ಧಾರವಾಡದ ನಿರ್ದೇಶಕರಾಗಿದ್ದರು. ಕಲಿಯುಗದ ಕುಡುಕ ಸೇರಿದಂತೆ ಅನೇಕ ಉತ್ತರ ಕರ್ನಾಟಕದ ಹಾಸ್ಯ ನಾಟಕಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.