ADVERTISEMENT

ಬಾಲಿವುಡ್ ಕುರಿತಾದ ಮಹೇಶ್ ಬಾಬು ಹೇಳಿಕೆಗೆ ನಿರ್ದೇಶಕ ಆರ್‌ಜಿವಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 10:23 IST
Last Updated 13 ಮೇ 2022, 10:23 IST
ರಾಮ್ ಗೋಪಾಲ್ ವರ್ಮಾ ಮತ್ತು ಮಹೇಶ್‌ ಬಾಬು
ರಾಮ್ ಗೋಪಾಲ್ ವರ್ಮಾ ಮತ್ತು ಮಹೇಶ್‌ ಬಾಬು   

ಮುಂಬೈ: ‘ನನಗೆ ಸಂಭಾವಣೆ ನೀಡುವಷ್ಟು ಬಾಲಿವುಡ್‌ ಶಕ್ತವಾಗಿಲ್ಲ’ ಎಂದು ತೆಲುಗು ನಟ ಮಹೇಶ್‌ ಬಾಬು ನೀಡಿದ್ದ ಹೇಳಿಕೆ ಕುರಿತು ತೆಲುಗು ಚಿತ್ರರಂಗದ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್‌ ಬಗ್ಗೆ ಮಹೇಶ್‌ ಬಾಬು ನೀಡಿರುವ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಬಾಲಿವುಡ್ ನಟಿ ಕಂಗನಾ ಸೇರಿದಂತೆ ಅನೇಕರು ಮಹೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ವರ್ಮಾ, ‘ನಟನಾಗಿ ಸಿನಿಮಾ ಎಂಬುದು ಅವರ (ಮಹೇಶ್) ಆಯ್ಕೆಯಾಗಿದೆ. ‘ನನಗೆ ಸಂಭಾವಣೆ ನೀಡುವಷ್ಟು ಬಾಲಿವುಡ್‌ ಶಕ್ತವಾಗಿಲ್ಲ’ ಎಂಬ ಅವರ ಹೇಳಿಕೆ ನಿಜಕ್ಕೂ ನನಗೆ ಅರ್ಥವಾಗಿಲ್ಲ. ಅವರು ಏನು ಅರ್ಥೈಸಿದ್ದಾರೆಂದು ನನಗೆ ಇನ್ನೂ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಬಾಲಿವುಡ್ ಎನ್ನುವುದು ಕಂಪನಿಯಲ್ಲ.. ಅದು ಮಾಧ್ಯಮಗಳು ಕೊಟ್ಟಿರುವ ಹಣೆಪಟ್ಟಿಯಷ್ಟೆ’ ಎಂದು ಹೇಳುವ ಮೂಲಕ ಮಹೇಶ್ ಬಾಬುಗೆ ಆರ್‌ಜಿವಿ ತಿರುಗೇಟು ಕೊಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ‘ದಕ್ಷಿಣ ಭಾರತದ ಸಿನಿಮಾಗಳು ಏನೇ ಮಾಡಿದರೂ ದುಡ್ಡು ಮಾಡುತ್ತವೆ’ ಎಂದು ಆರ್‌ಜಿವಿ ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಇತ್ತೀಚೆಗೆ ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಚಾರ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಿಂದಿಯಲ್ಲಿ ಯಾವಾಗ ಸಿನಿಮಾ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನು ಸೊಕ್ಕಿನ ಧ್ವನಿಯಲ್ಲಿ ಮಾತನಾಡುತ್ತೇನೆಯೇ ಎಂದು ನನಗೆ ಗೊತ್ತಿಲ್ಲ. ನನಗೆ ಹಿಂದಿಯಿಂದ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ, ಸರಳ ವಿಷಯವೆಂದರೆ ಬಾಲಿವುಡ್‌ನವರು ನನ್ನನ್ನು ಭರಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಹಾಗಾಗಿ ನಾನು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ತೆಲುಗು ಚಿತ್ರರಂಗದಲ್ಲಿ ನನಗೆ ಸಾಕಷ್ಟು ಗೌರವ ಸಿಗುತ್ತಿದೆ. ಹಾಗಾಗಿ ನನ್ನ ಚಿತ್ರರಂಗ ಬಿಟ್ಟು ಬೇರೆ ಚಿತ್ರರಂಗಕ್ಕೆ ಹೋಗುವ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ’ ಎಂದಿದ್ದರು.

ಮಹೇಶ್‌ ಬಾಬು –ಕೀರ್ತಿ ಸುರೇಶ್‌ ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರ ಮೇ 12 (ಗುರುವಾರ) ವಿಶ್ವದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.