ನಟ ಅಕ್ಷಯ್ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಮಸೇತು’ವಿನ ಟ್ರೇಲರ್ ಬಿಡುಗಡೆಯಾಗಿದೆ. ಅಭಿಮಾನಿಗಳಿಂದ ಟ್ರೇಲರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸದ್ಯಕ್ಕೆ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ರಾಮಾಯಣ ಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ರಾಮಸೇತುವಿನ ಹುಡುಕಾಟದ ಕಥೆಯೆಂಬುದು ಮೇಲ್ನೋಟಕ್ಕೆ ಟ್ರೇಲರ್ ಹೇಳುತ್ತಿದೆ. ಶತ್ರುಸೇನೆ ರಾಮಸೇತುವನ್ನು ಕೆಡವಲು ಯತ್ನಿಸುತ್ತಿರುತ್ತದೆ. ಅದರೆ ಅಕ್ಷಯ್ಕುಮಾರ್ ಏಕಾಂಗಿಯಾಗಿ ಸೇತುವೆ ನಿರ್ಮಾಣವಾಗಿತ್ತು ಎಂಬುದನ್ನು ಸಾಬೀತುಪಡಿಸಲು ಯತ್ನಿಸುತ್ತಾರೆ.
ಆದರೆ ಕೆಟ್ಟ ವ್ಯಕ್ತಿಗಳು ಯಾರು? ಇದೊಂದು ರಾಜಕೀಯ ಪ್ರೇರಿತ ಧರ್ಮಭಕ್ತಿಯ ಕಥೆಯಾ ಎಂಬ ಸುಳಿವು ಸಿಗುವುದಿಲ್ಲ. ಟ್ರೇಲರ್ ಅಂತ್ಯದಲ್ಲಿ ರಾಮಸೇತುವಿತ್ತು ಎಂಬ ರೀತಿ ಅಕ್ಷಯ್ಕುಮಾರ್ ಬಂಗಾರದ ಕಲ್ಲೊಂದನ್ನು ಎತ್ತಿಕೊಂಡು ಬರುತ್ತಾರೆ.
ಸತ್ಯದೇವ್, ಜಾಕ್ವೆಲಿನ್ ಫರ್ನಾಂಡೀಸ್, ನುಸ್ರತ್ ಭರುಚ ಮೊದಲಾದವರು ಚಿತ್ರದಲ್ಲಿದ್ದಾರೆ. ಅಕ್ಷಯ್ ಕುಮಾರ್ ಪುರಾತತ್ವ ಶಾಸ್ತ್ರಜ್ಞರಾಗಿ ಪಾತ್ರ ನಿರ್ವಹಿಸಿದ್ದಾರೆ. ಹನುಮಂತ ಸೀತೆಯನ್ನು ಕರೆತರಲು ಲಂಕೆಗೆ ಹೊರಟ ರಾಮನಿಗಾಗಿ ಕಲ್ಲುಗಳಿಂದ ಸೇತುವೆ ನಿರ್ಮಿಸಿದ್ದ ಎಂಬ ಕಥೆಯಿದೆ. ಭಾರತ–ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಈ ಸೇತುವೆ ಇತ್ತು ಎಂಬುದಕ್ಕೆ ಒಂದಷ್ಟು ಪುರಾವೆಗಳು ದೊರಕಿವೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಕ್ಷಯ್ಕುಮಾರ್ ಅದೇ ಸಮುದ್ರದೊಳಗೆ ಇಳಿದು ಕಲ್ಲೊಂದನ್ನು ಎತ್ತಿಕೊಂಡು ಬಂದು ಅಂತ್ಯದಲ್ಲಿ ರಾಮಸೇತು ನಿಜವೆಂಬುದು ಸಾರುತ್ತಾರೆ.
ಟ್ರೇಲರ್ ಗಮನಿಸಿದರೆ ಒಂದು ಸಾಧಾರಣ ಆಕ್ಷನ್ ಸಿನಿಮಾದಂತೆ ತೋರುತ್ತಿದೆ. ಹೀಗಾಗಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಷೇಕ್ ಶರ್ಮಾ ನಿರ್ದೇಶನದ ಸಿನಿಮಾವನ್ನು ಕೇಪ್ ಆಫ್ ಗುಡ್ ಫಿಲಂ ಹಾಗೂ ಅಮೆಜಾನ್ ಪ್ರೈಂಗಳು ಜಂಟಿಯಾಗಿ ನಿರ್ಮಿಸಿವೆ. ಅ.25ರಂದು ತೆರೆಗೆ ಬರಲಿರುವ ಸಿನಿಮಾ, ಬಳಿಕ ಅಮೆಜಾನ್ನಲ್ಲಿ ಬರುವುದು ಖಚಿತ. ಇದು ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅಕ್ಷಯ್ ಕುಮಾರ್ ಅವರ 5ನೇ ಸಿನಿಮಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.