ADVERTISEMENT

ಬುಡಕಟ್ಟು ಹುಡುಗಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟನೆ?

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 9:44 IST
Last Updated 15 ಸೆಪ್ಟೆಂಬರ್ 2020, 9:44 IST
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ   

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ಆಕೆ ನಟಿಸಿದ ತೆಲುಗಿನ ‘ಸರಿಲೇರು ನೀಕೆವ್ವರು’ ಮತ್ತು ‘ಭೀಷ್ಮ’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡ ಬಳಿಕ ಆಕೆಗೆ ಟಾಲಿವುಡ್‌ನಲ್ಲಿ ಅವಕಾಶದ ಹೆಬ್ಬಾಗಿಲು ತೆರೆದಿದೆ. ಸುಕುಮಾರ್‌ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ನಟ ಅಲ್ಲು ಅರ್ಜುನ್‌ಗೆ ಆಕೆಯೇ ಹೀರೊಯಿನ್. ಈ ನಡುವೆ ‘ಆಚಾರ್ಯ’ ಚಿತ್ರದಲ್ಲೂ ರಾಮ್‌ ಚರಣ್‌ ಜೊತೆಗೆ ಹೆಜ್ಜೆ ಹಾಕಲು ರಶ್ಮಿಕಾ ಸಜ್ಜಾಗುತ್ತಿದ್ದಾರೆ.

‘ಪುಷ್ಪ’ದಲ್ಲಿ ರಶ್ಮಿಕಾ ಚಿತ್ತೂರು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಈಗ ಆಕೆ ಚಿತ್ತೂರಿನ ಬುಡಕಟ್ಟು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ರಶ್ಮಿಕಾ ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಇಂತಹ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸವಾಲಿನಿಂದ ಕೂಡಿರುವ ಪಾತ್ರ ಇದು. ಈ ಮೊದಲ ಚಿತ್ತೂರು ಭಾಗದ ತೆಲುಗು ಶೈಲಿಯಲ್ಲಿ ಆಕೆಯ ಪಾತ್ರಕ್ಕೆ ಡಬ್ಬಿಂಗ್‌ ಮಾಡಿಸಲು ಚಿತ್ರತಂಡ ಕಲಾವಿದರ ಹುಡುಕಾಟ ನಡೆಸಿತ್ತು. ಆದರೆ, ಆಕೆಯೇ ತನ್ನ ಪಾತ್ರಕ್ಕೆ ಡಬ್ಬಿಂಗ್‌ ಮಾಡಲು ನಿರ್ಧರಿಸಿದ್ದಾರಂತೆ.

ADVERTISEMENT

ರಕ್ತಚಂದನ ಕಳ್ಳಸಾಗಣೆ ಸುತ್ತದ ಇದರ ಕಥೆ ಹೆಣೆಯಲಾಗಿದೆ. ಅಲ್ಲು ಅರ್ಜುನ್‌ ಅವರದ್ದು ಲಾರಿ ಡ್ರೈವರ್‌ ಪಾತ್ರ. ರಶ್ಮಿಕಾ ಅವರ ಮಾತೃಭಾಷೆ ಕೊಡವ. ‘ಪುಷ್ಪ’ದಲ್ಲಿ ಚಿತ್ತೂರು ಶೈಲಿಯಲ್ಲಿ ಡೈಲಾಗ್‌ ಹೇಳಬೇಕಿದೆ. ಹಾಗಾಗಿ, ಆ ಶೈಲಿಯನ್ನು ಕರಗತ ಮಾಡಿಕೊಳ್ಳುವಲ್ಲಿ ಅವರು ನಿರತರಾಗಿದ್ದಾರಂತೆ.

‘ಪುಷ್ಪ’ ಪಕ್ಕಾ ಆ್ಯಕ್ಷನ್‌ ಚಿತ್ರ. ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ಕಾಡಿನಲ್ಲಿಯೇ ನಡೆಯಲಿದೆ. ನವೆಂಬರ್‌ನಿಂದ ಮೆಹಬೂಬ್‌ ನಗರದ ಅರಣ್ಯ ಪ್ರದೇಶದಲ್ಲಿ ಶೂಟಿಂಗ್‌ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಅವರ ಹಾಡಿನ ಶೂಟಿಂಗ್‌ ನಡೆಯಲಿದೆ. ಇದಕ್ಕೆ ಮೈತ್ರಿ ಮೂವಿ ಮೇಕರ್ಸ್‌ ಬಂಡವಾಳ ಹೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.