ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಣ್ಣದ ಬದುಕಿನಲ್ಲಿ ಕಳೆದ 25 ವಸಂತಗಳ ಸಾರ್ಥಕತೆಯನ್ನು ಸ್ಮರಣೀಯಗೊಳಿಸಲು ‘ಸುದೀಪ್ ಸಾಂಸ್ಕೃತಿಕ ಪರಿಷತ್ತು’ ಸುದೀಪ್ ಭಾವಚಿತ್ರವುಳ್ಳ 25 ಗ್ರಾಂ ತೂಕದ 1 ಸಾವಿರ ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಲಿದೆ.
‘ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವೃತ್ತಿಜೀವನದ ಬೆಳ್ಳಿ ಮಹೋತ್ಸವ ಸಂಭ್ರಮಕ್ಕೆ ಬೆಳ್ಳಿ ನಾಣ್ಯ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಭರ್ತಿ 25 ವಸಂತಗಳನ್ನು ಪೂರೈಸಿದ ನಾಡಿನ ಹೆಮ್ಮೆಯ ಕಲಾವಿದ, ನಿರೂಪಕ, ನಿರ್ದೇಶಕ, ನಿರ್ಮಾಪಕ, ಗಾಯಕ ಸುದೀಪ್. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ‘ಸುದೀಪ್ ಸಾಂಸ್ಕೃತಿಕ ಪರಿಷತ್ತು’ ತಿಳಿಸಿದೆ.
ಸದ್ಯ ದುಬೈನಲ್ಲಿರುವ ಸುದೀಪ್ ಅವರು ಬೆಂಗಳೂರಿಗೆ ಮರಳಿದ ನಂತರ ಅವರಿಗೆ ಉಡುಗೊರೆಯಾಗಿ 100 ಗ್ರಾಂ ಬೆಳ್ಳಿ ನಾಣ್ಯವನ್ನು ನೀಡಲಾಗುವುದು. ಸುದೀಪ್ ಅವರ ವೃತ್ತಿ ಜೀವನದ 25 ವರ್ಷಗಳನ್ನು ಸ್ಮರಿಸುವ ಅವರ ಭಾವಚಿತ್ರವಿರುವ 25 ಗ್ರಾಂ ಬೆಳ್ಳಿ ನಾಣ್ಯಗಳನ್ನು ಅಭಿಮಾನಿಗಳು ಸಹ ಪಡೆಯಬಹುದಾಗಿದೆ ಎಂದು ಸುದೀಪ್ ಸಾಂಸ್ಕೃತಿಕ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಸುದೀಪ್ ಕಟೌಟ್ ಇಂದು ರಾತ್ರಿ 9 ಗಂಟೆಗೆ ರಾರಾಜಿಸಲಿದೆ. ಅಲ್ಲದೇ ‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆಯ ಲೋಗೋ ಮತ್ತು ಚಿತ್ರದ ಮೂರು ನಿಮಿಷಗಳ ಟೀಸರ್ ಕೂಡ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ಚಿತ್ಕಲಾ ಬಿರಾದಾರ್, ಸಿದ್ದು ಮೂಲಿಮನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.