
ಮಹಿಳಾ ಪ್ರಧಾನ ಕಥಾವಸ್ತುವನ್ನು ಹೊಂದಿರುವ ‘ರುಧ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಶರತ್ ಶಿಡ್ಲಘಟ್ಟ ನಿರ್ದೇಶನದ ಚಿತ್ರಕ್ಕೆ ಪುಟ್ಟರಾಜು ಅವರು ಕೆಪಿಜಿ ವಿಷನ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ.
‘ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಸತ್ಯ ಘಟನೆಯ ಒಂದು ಎಳೆಯನ್ನು ಬಳಸಿಕೊಂಡು, ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಕಥೆ ಹೆಣೆಯಲಾಗಿದೆ. ಸಣ್ಣ ಸುಳಿವನ್ನು ನೀಡಿದರೂ ಕಥೆಯ ಸಾರಾಂಶ ತಿಳಿಯುತ್ತದೆ. ಅದಕ್ಕಾಗಿ ಈಗಲೇ ಏನೂ ಹೇಳುವುದಿಲ್ಲ. ‘ರುಧ’ ಸಂಸ್ಕೃತ ಪದವಾಗಿದ್ದು, ನಟೋರಿಯಸ್ ಎಂಬ ಅರ್ಥ ಕೊಡುತ್ತದೆ. ಚಿತ್ರದಲ್ಲಿ ರಕ್ತದೋಕುಳಿ ಹೆಚ್ಚು ಇರುತ್ತದೆ. ಮೂರು ಮುಖ್ಯ ಪಾತ್ರಗಳನ್ನು ಹೊರತುಪಡಿಸಿ, ಮಿಕ್ಕಂತೆ ಅನುಭವಿ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಕೊಡಗು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ರೂಪಿಸಲಾಗಿದೆ’ ಎಂದರು ನಿರ್ದೇಶಕ.
ವರಲಕ್ಷೀ, ಮಾನಸ ಗೌಡ, ರಥರ್ವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಚಿತ್ರಗ್ರಹಣ, ವಿಜಯ್ ಸಂಕಲನವಿರಲಿದೆ. ಸಂಗೀತ ನಿರ್ದೇಶಕರು ಇನ್ನಷ್ಟೇ ಆಯ್ಕೆಯಾಗಬೇಕಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.