ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈನಲ್ಲಿರುವ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಸೈಫ್, ಲೀಲಾವತಿ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 54 ವರ್ಷದ ಅವರು, ‘ಪ್ರಾಣಾಪಾಯ’ದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ‘ಸದ್ಗುರು ಶರಣ್’ ಅಪಾರ್ಟ್ಮೆಂಟ್ನ 12ನೇ ಮಹಡಿಯಲ್ಲಿರುವ ನಿವಾಸದಲ್ಲಿ ಗುರುವಾರ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿರುವ ಈ ಘಟನೆಯು ಖ್ಯಾತನಾಮರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮುಂಬೈನ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಮಹಾರಾಷ್ಟ್ರದ ಆಡಳಿತ ಮತ್ತು ವಿರೋಧ ಪಕ್ಷಗಳು ಆರೋಪ–ಪ್ರತ್ಯಾರೋಪ ಮಾಡಿವೆ.
‘ಸೈಫ್ ಅವರ ಬೆನ್ನೆಲುಬಿಗೆ ಗಂಭೀರ ಗಾಯ ಆಗಿದ್ದು, ಅಲ್ಲಿ ಹೊಕ್ಕಿದ್ದ ಚಾಕು ಹೊರತೆಗೆಯಲು ಮತ್ತು ಬೆನ್ನುಮೂಳೆಯ ಮಜ್ಜೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ಲೀಲಾವತಿ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ನಿತಿನ್ ಡಾಂಗೆ ಹೇಳಿದ್ದಾರೆ.
‘ಅವರ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಐಸಿಯುವಿನಿಂದ ಕೊಠಡಿಗೆ ಸ್ಥಳಾಂತರಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ. ಚಾಕುವಿನ 2.5 ಇಂಚು ಉದ್ದದ ತುಂಡು ಬೆನ್ನುಮೂಳೆಯ ಬಳಿ ಸಿಲುಕಿದ್ದು, ಅದನ್ನು ಹೊರತೆಗೆಯಲಾಗಿದೆ.
‘ಸೈಫ್ ಅವರನ್ನು ಬೆಳಗಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಗೆ ಕರೆತಂದಿದ್ದಾರೆ. ನಟನ ದೇಹದಲ್ಲಿ ಆರು ಕಡೆ ಗಾಯಗಳಾಗಿವೆ. ಎರಡು ಕಡೆ ಆಳವಾದ ಗಾಯಗಳಾಗಿದ್ದು, ಅದರಲ್ಲಿ ಒಂದು ಬೆನ್ನುಮೂಳೆಯ ಹತ್ತಿರದಲ್ಲಿದೆ. ಎಡಗೈ ಮತ್ತು ಕುತ್ತಿಗೆಯ ಬಳಿಯೂ ಗಾಯಗಳು ಆಗಿವೆ’ ಎಂದು ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಡಾ.ಲೀನಾ ಜೈನ್ ಮತ್ತು ಅರವಳಿಕೆ ತಜ್ಞ ಡಾ.ನಿಶಾ ಗಾಂಧಿ ಅವರನ್ನೊಳಗೊಂಡ ತಂಡವು ಶಸ್ತ್ರಚಿಕಿತ್ಸೆ ನಡೆಸಿದೆ.
‘ದರೋಡೆ ಯತ್ನ’ದ ವೇಳೆ ಈ ಘಟನೆ ನಡೆದಿದೆ ಎಂದು ಸೈಫ್ ಅವರ ಸಾರ್ವಜನಿಕ ಸಂಪರ್ಕ ತಂಡದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 311 (ಕೊಲೆ ಅಥವಾ ಗಂಭೀರ ಗಾಯ ಉಂಟುಮಾಡುವ ಪ್ರಯತ್ನದೊಂದಿಗೆ ದರೋಡೆ) ಮತ್ತು 331(4) (ರಾತ್ರಿಯಲ್ಲಿ ಮನೆಗೆ ಅಕ್ರಮ ಪ್ರವೇಶ) ಅಡಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆಯ ವೇಳೆ ಸೈಫ್ ಅವರ ಪತ್ನಿ, ನಟಿ ಕರೀನಾ ಕಪೂರ್ ಖಾನ್ (44), ಪುತ್ರರಾದ ತೈಮೂರ್ ಅಲಿ ಖಾನ್ (8) ಮತ್ತು ಜೆಹಾಂಗೀರ್ ಅಲಿ ಖಾನ್ (4) ಮನೆಯಲ್ಲಿದ್ದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ನಟಿ ಶರ್ಮಿಳಾ ಠಾಗೋರ್ ಅವರ ಪುತ್ರ ಸೈಫ್ ಅವರು ‘ಓಂಕಾರ’, ‘ದಿಲ್ ಚಾಹ್ತಾ ಹೈ’ ಮತ್ತು ‘ಕಲ್ ಹೊ ನಾ ಹೊ’ ಚಲನಚಿತ್ರಗಳಲ್ಲಿನ ತಮ್ಮ ನಟನೆಯ ಮೂಲಕ ಜನಪ್ರಿಯರಾಗಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿ
ಗುರುವಾರ ಬೆಳಗಿನ ಜಾವ 2.30ರ ಸುಮಾರಿಗೆ ಘಟನೆ
ನಸುಕಿನ 3.30ಕ್ಕೆ ಲೀಲಾವತಿ ಆಸ್ಪತ್ರೆಗೆ ದಾಖಲು
ಆರು ಸಲ ಇರಿತ; ಎರಡು ಕಡೆ ಆಳವಾದ ಗಾಯ
ಬೆನ್ನುಮೂಳೆಗೆ ತುರ್ತು ಶಸ್ತ್ರಚಿಕಿತ್ಸೆ
ಆರೋಪಿಯ ಪತ್ತೆಗೆ 10 ತಂಡಗಳ ರಚನೆ
ದುಷ್ಕರ್ಮಿಯು ಸೈಫ್ ಅವರ ಮನೆಗೆ ಬಲವಂತವಾಗಿ ಅಥವಾ ಬಾಗಿಲು ಮುರಿದು ಪ್ರವೇಶಿಸಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆತ ರಾತ್ರಿಯೇ ಅಪಾರ್ಟ್ಮೆಂಟ್ನ ಆವರಣದಲ್ಲಿ ಅಡಗಿ ಕುಳಿತಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಆರೋಪಿಯು ತುರ್ತು ನಿರ್ಗಮನಕ್ಕಿರುವ ಮೆಟ್ಟಿಲುಗಳ ಮೂಲಕ ಪರಾರಿಯಾದ ದೃಶ್ಯ ಅಪಾರ್ಟ್ಮೆಂಟ್ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ‘ದುಷ್ಕರ್ಮಿಯ ಪತ್ತೆಗೆ 10 ತಂಡಗಳನ್ನು ರಚಿಸಲಾಗಿದೆ. ಇದೊಂದು ದರೋಡೆ ಯತ್ನ ಎಂಬುದನ್ನು ಪ್ರಾಥಮಿಕ ತನಿಖೆಯಿಂದ ಕಂಡುಕೊಂಡಿದ್ದೇವೆ. ಆರೋಪಿಯ ಗುರುತು ಪತ್ತೆಹಚ್ಚಲಾಗಿದ್ದು ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ಡಿಸಿಪಿ ದೀಕ್ಷಿತ್ ಗೆಡಾಮ್ ತಿಳಿಸಿದ್ದಾರೆ.
ಸೈಫ್ ಪತ್ನಿ ಕರೀನಾ ಅವರು ಈ ಘಟನೆಗೆ ಅಲ್ಪ ಮುನ್ನ ಮನೆಗೆ ತಲುಪಿದ್ದರು. ಅವರು ತಕ್ಷಣವೇ ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಟೊದಲ್ಲಿ ಸೈಫ್ ಮನೆಗೆ ಬಂದ ಇಬ್ರಾಹಿಂ ಮನೆಕೆಲಸದ ಸಿಬ್ಬಂದಿಯ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸೈಫ್ ಮನೆಕೆಲಸದಾಕೆ ಎಲಿಯಾಮಾ ಫಿಲಿಪ್ಸ್ ಅವರು ಮೊದಲು ದುಷ್ಕರ್ಮಿಯನ್ನು ನೋಡಿದ್ದು ಬೊಬ್ಬೆ ಹಾಕಿ ನಟನನ್ನು ಎಚ್ಚರಿಸಿದ್ದಾರೆ. ಅದರ ಬೆನ್ನಲ್ಲೇ ಸೈಫ್ ಮತ್ತು ದುಷ್ಕರ್ಮಿ ಮಧ್ಯೆ ಹೊಡೆದಾಟ ನಡೆದಿದೆ. ಈ ವೇಳೆ ಆತ ಚಾಕುವಿನಿಂದ ಆರು ಬಾರಿ ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೈಫ್ ರಕ್ಷಣೆಗೆ ಧಾವಿಸಿದ ಎಲಿಯಾಮಾ ಮತ್ತು ಗೀತಾ ಎಂಬ ಇನ್ನೊಬ್ಬ ಸಿಬ್ಬಂದಿಗೆ ಸಣ್ಣ ಗಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.