ಮುಂಬೈ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಪುತ್ರನಿಗೆ ನಟ ಸಲ್ಮಾನ್ ಖಾನ್ ಪಡಿತರ ಮತ್ತು ಶೈಕ್ಷಣಿಕ ಪರಿಕರ ಒದಗಿಸಿ ನೆರವಾಗಿದ್ದಾರೆ. ಅಂದಹಾಗೆ ನೆರವು ಪಡೆದ ಈ ಯುವಕ ಕರ್ನಾಟಕದವನು.
ಸಲ್ಮಾನ್ ಖಾನ್ ತಮ್ಮ ಪ್ರತಿಷ್ಠಾನದ ಮೂಲಕ ಸಾಮಾಜಿಕ ಸೇವೆ ಮಾಡುತ್ತಿರುವುದನ್ನು ತಿಳಿದ ಯುವಕ ಸಾಮಾಜಿಕ ಜಾಲತಾಣದ ಮೂಲಕ ನೆರವಿಗೆ ಮೊರೆ ಇಟ್ಟಿದ್ದ. ಇದಕ್ಕೆ ಸ್ಪಂದಿಸಿದ ಸಲ್ಮಾನ್, ಆ ಯುವಕನಿಗೆ ಅಗತ್ಯ ನೆರವು ಒದಗಿಸಿದ್ದಾರೆ.
ಈ ಕುರಿತು ಶಿವಸೇನೆಯ ಯುವ ವಿಭಾಗದ ನಾಯಕ ರಾಹುಲ್ ಕನಾಲ್ ಮಾಹಿತಿ ನೀಡಿ, ‘ನಾವು ಯುವಕನಿಗೆ ಪಡಿತರ ಮತ್ತು ಶೈಕ್ಷಣಿಕ ಪರಿಕರ ಒದಗಿಸಿದ್ದೇವೆ. ನಾವು ಅವನ ಜೊತೆಗಿದ್ದೇವೆ. ಮುಂದೆಯೂ ಅವರ ಬದುಕಿಗೆ ಅಗತ್ಯ ನೆರವು ನೀಡುತ್ತೇವೆ. ಸಲ್ಮಾನ್ ಅವರ ಅಭಿಮಾನಿಗಳ ಕುಟುಂಬದವರೂ ನಮಗೆ ಈ ರೀತಿ ಸಹಾಯ ಮಾಡಲು ಸಹಕರಿಸುತ್ತಿದ್ದಾರೆ. ಅಗತ್ಯ ಉಳ್ಳ ಪ್ರತಿಯೊಬ್ಬ ಮನುಷ್ಯನಿಗೂ ನೆರವಾಗಬೇಕು ಎಂದು ಸಲ್ಮಾನ್ ನಮಗೆ ಹೇಳಿದ್ದಾರೆ. ಅವರ ಮೂಲಕ ಸಹಾಯ ಕೇಳಿ ಬರುವ ಪ್ರತಿಯೊಬ್ಬರಿಗೂ ನೆರವಾಗಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್ (ಎಫ್ವೈಸಿಇ)ನ ಅಧ್ಯಕ್ಷ ಬಿ.ಎನ್. ತಿವಾರಿ ಅವರು ಹೇಳುವಂತೆ, 2020ರಲ್ಲಿ ಸಲ್ಮಾನ್ ತಮ್ಮ ಪ್ರತಿಷ್ಠಾನದ ಮೂಲಕ 25 ಸಾವಿರ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿದ್ದರು. ಕೋವಿಡ್ ಎರಡನೇ ಅಲೆ ಅಪ್ಪಳಿಸುವಿಕೆ ಜೋರಾದಂತೆ ಚಿತ್ರರಂಗದ ಹಲವು ಪ್ರಮುಖರು ನೊಂದವರಿಗೆ ನೆರವಾಗಲು ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.