ಹೈದರಾಬಾದ್: ನಟಿ ಸಮಂತಾ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ವಿವಾಹದ ಬಗ್ಗೆ ಸಂತಸ ಹಂಚಿಕೊಂಡಿರುವ ನಿಡಿಮೋರು ಸಹೋದರಿ ಶೀತಲ್, ಪ್ರತಿಯೊಬ್ಬರು ತಮ್ಮ ಆತ್ಮ ಸಂಗಾತಿಯನ್ನು ಕಂಡುಕೊಳ್ಳುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಡಿ.1ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಒಳಭಾಗದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಭೂತ ಶುದ್ಧಿ ವಿವಾಹ ಪದ್ಧತಿಯಲ್ಲಿ ಸಮಂತಾ–ನಿಡಿಮೋರು ವಿವಾಹ ನೆರವೇರಿದೆ.
ಸಹೋದರನ ವಿವಾಹದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶೀತಲ್, ಸಮಂತಾ ಅವರನ್ನು ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
‘ಇಂದು ಪ್ರಾರ್ಥನೆ ಮಾಡುತ್ತಿರುವಾಗ ಕಂಬನಿ ತುಂಬಿದ ಕಣ್ಣುಗಳಿಂದ ನಡುಗುತ್ತಾ ಶಿವಲಿಂಗವನ್ನು ಅಪ್ಪಿಕೊಂಡೆ. ಇದು ನೋವಿನಿಂದ ಬಂದ ಕಣ್ಣೀರಲ್ಲ... ಕೃತಜ್ಞತೆಯ ಕಣ್ಣೀರು’ ಎಂದು ಬರೆದುಕೊಂಡಿದ್ದಾರೆ’
‘ರಾಜ್ ಮತ್ತು ಸಮಂತಾ ವಿವಾಹವು ನಮ್ಮ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತಂದಿದೆ, ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಒಂದು ಕುಟುಂಬವಾಗಿ ಅವರು ಹೇಗೆ ಮುಂದೆ ನಡೆಯುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಹೆಮ್ಮೆಯಿದೆ. ಎರಡು ಹೃದಯಗಳು ಒಂದೇ ಮಾರ್ಗವನ್ನು ಆಯ್ದುಕೊಂಡಾಗ ಮಾತ್ರ ಶಾಂತಿ ನೆಲೆಸುತ್ತದೆ’ ಎಂದು ಹೇಳಿದ್ದಾರೆ.
‘ಒಂದು ಕುಟಂಬವಾಗಿ ಅವರೊಂದಿಗೆ ನಾವು ಸದಾ ನಿಲ್ಲುತ್ತೇವೆ. ಎಲ್ಲ ರೀತಿಯಲ್ಲೂ ಬೆಂಬಲಿಸುತ್ತೇವೆ’ ಎಂದಿದ್ದಾರೆ.
‘ಕೆಲವು ಸಂಬಂಧಗಳು ಸುಮ್ಮನೆ ಹುಟ್ಟುವುದಿಲ್ಲ... ಅವುಗಳು ಶಾಂತಿಯನ್ನು ಹೊತ್ತುಕೊಂಡು ನಮ್ಮೆಡೆಗೆ ಬರುತ್ತವೆ. ಪ್ರತಿಯೊಬ್ಬರಿಗೂ ಇಂತಹ ಪ್ರೀತಿ ತುಂಬಿದ, ಶಾಂತಿಯುತ ಸಂಬಂಧಗಳು ಸಿಗಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.