ADVERTISEMENT

‘ಬಹುಕೃತ ವೇಷಂ’ ತೊಟ್ಟ ವೈಷ್ಣವಿ ಗೌಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 7:30 IST
Last Updated 7 ಫೆಬ್ರುವರಿ 2022, 7:30 IST
ವೈಷ್ಣವಿ ಗೌಡ
ವೈಷ್ಣವಿ ಗೌಡ   

ಕಿರುತೆರೆಯಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾಗಿ ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದ ನಟಿ ವೈಷ್ಣವಿ ಗೌಡ, ಇದೀಗ ಚಂದನವನದಲ್ಲಿ ತಲ್ಲೀನರಾಗಿದ್ದಾರೆ. ‘ಬಹುಕೃತ ವೇಷಂ’ ಎಂಬ ಶೀರ್ಷಿಕೆಯ ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಾಯಕಿಯಾಗಿ ವೈಷ್ಣವಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ‘ಗೌಡ್ರುಸೈಕಲ್’ ಎಂಬ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ತಂಡದ ಬಹುತೇಕರು ಸೇರಿ ತಯಾರಿಸಿರುವ ಸಿನಿಮಾವೇ ‘ಬಹುಕೃತ ವೇಷಂ’. ವೈಷ್ಣವಿ ಗೌಡ ಹಾಗೂ ‘ಗೌಡ್ರುಸೈಕಲ್’ ಚಿತ್ರದ ನಾಯಕ ಶಶಿಕಾಂತ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಗೌಡ್ರುಸೈಕಲ್‌’ ಚಿತ್ರ ನಿರ್ದೇಶಿಸಿದ್ದ ಪ್ರಶಾಂತ್ ಕೆ. ಎಳ್ಳಂಪಳ್ಳಿ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಫೆ.18ಕ್ಕೆ ಈ ಸಿನಿಮಾ ತೆರೆಕಾಣಲಿದೆ.

‘ನನ್ನದು 2 ಶೇಡ್‌ ಇರುವ ಪಾತ್ರ. ‘ಡಿಲೇರಿಯಂ ಫೋಬಿಯಾ’ ಎನ್ನುವ ಕಾಯಿಲೆಯ ಮೇಲೆ ಮಾಡಿರುವ ಚಿತ್ರವಿದು. ಕಥೆ ಬರೆಯುವಾಗಲೇ ನಾಯಕಿಯ ಪಾತ್ರಕ್ಕೆ ವೈಷ್ಣವಿ ಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು.ಚಿತ್ರದ ಪ್ರೀಕ್ಲೈಮ್ಯಾಕ್ಸನಲ್ಲಿ ನಾಲ್ಕುವರೆ ನಿಮಿಷದ ಒಂದೇ ದೃಶ್ಯವಿದೆ. ಇದರಲ್ಲಿ ವೈಷ್ಣವಿ ಅವರು ಅದ್ಭುತವಾಗಿ ನಟಿಸಿದ್ದಾರೆ. 70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದರು ಶಶಿಕಾಂತ್‌.

ADVERTISEMENT

ಚಿತ್ರದ ಕಥೆ, ಚಿತ್ರಕಥೆ ಬರೆದಿರುವ ಅಧ್ಯಾಯ ತೇಜ್ ಮಾತನಾಡಿ ‘ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಕಾಯಿಲೆ ಇತ್ತು. ಇಂಥ ವಿಷಯವನ್ನು ಇಟ್ಟುಕೊಂಡು ಕಥೆ ಮಾಡುವ ಕುರಿತು ಶಶಿಕಾಂತ್‌ ಜೊತೆ ಚರ್ಚಿಸಿದ್ದೆ. ವಿಷಯಾಧಾರಿತ ಚಿತ್ರವನ್ನು ಕಮರ್ಷಿಯಲ್‌ ರೂಪದಲ್ಲಿ ಮಾಡಿದ್ದೇವೆ’ ಎಂದರು.

ಎಚ್‌. ನಂದ ಹಾಗೂ ಡಿ.ಕೆ.ರವಿ ಅವರು ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರೆ, ಕಿರಣ್ ಕೃಷ್ಣಮೂರ್ತಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.