ಬೆಂಗಳೂರು: ನಟ ದಿಗಂತ್ಆಫ್ರಿಕಾದ ಶಂಕಿತ ಡ್ರಗ್ ಪೆಡ್ಲರ್ ಜತೆ ವಿನಿಮಯ ಮಾಡಿಕೊಂಡ ಕೆಲವು ಮೊಬೈಲ್ ಸಂದೇಶಗಳನ್ನು ಅಳಿಸಿರುವುದು ಸಿಸಿಬಿ ಪೊಲೀಸ್ ವಿಚಾರಣೆ ವೇಳೆ ಗಮನಕ್ಕೆ ಬಂದಿದೆ.ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಮುಂದೆ ಬುಧವಾರ ಎರಡನೇ ಬಾರಿ ನಟ ದಿಗಂತ್ ಹಾಜರಾಗಿದ್ದರು.
ಸೆಪ್ಟೆಂಬರ್ 16ರಂದು ಪತ್ನಿ ಐಂದ್ರಿತಾ ರೇ ಮತ್ತು ದಿಗಂತ್ ಅವರಿಗೆ ಮೊದಲ ಬಾರಿ ಸಮನ್ಸ್ ಕಳಿಸಲಾಗಿತ್ತು. ಇದಾದನಂತರ ಬುಧವಾರ ಮತ್ತೊಮ್ಮೆ ಹಾಜರಾಗಲು ಹೇಳಿದ್ದು ಬೆಳಗ್ಗೆ 11.20ಕ್ಕೆ ದಿಗಂತ್ ಹಾಜರಾಗಿದ್ದರು. ಸುಮಾರು 3 ಗಂಟೆ ಕಾಲ ಪೊಲೀಸರು ವಿಚಾರಣೆ ನಡೆಸಿದ್ದು, ವಿವಿಧ ಜನರ ಬಗ್ಗೆ ಮತ್ತು ಅವರೊಂದಿಗೆ ಅವರ ಸಂಪರ್ಕದ ಬಗ್ಗೆ ದಿಗಂತ್ ಅವರನ್ನು ಪ್ರಶ್ನಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಸಿಸಿಬಿ ಪೊಲೀಸರುದಿಗಂತ್ ಅವರ ಸಂದೇಶಗಳನ್ನು ಪರಿಶೀಲಿಸಿದಾಗ ಆಫ್ರಿಕಾದ ಶಂಕಿತ ಡ್ರಗ್ ಪೆಡ್ಲರ್ ಜತೆ ವಿನಿಮಯ ಮಾಡಿಕೊಂಡಿರುವ ಮೆಸೇಜ್ ಸೇರಿದಂತೆ ಕೆಲವು ಸಂದೇಶಗಳನ್ನು ಅಳಿಸಿರುವುದು ಕಂಡು ಬಂದಿದೆ.ಮೊದಲ ವಿಚಾರಣೆಯ ವೇಳೆ ಸಿಸಿಬಿ ಅಧಿಕಾರಿಗಳು ದಿಗಂತ್ ಮತ್ತು ಐಂದ್ರಿತಾರ ಫೋನ್ಗಳನ್ನು ವಶಪಡಿಸಿಕೊಂಡಿದ್ದರು.
ಕಳೆದ ಬಾರಿ ಉತ್ತರಿಸದೇ ಇರುವ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಲಾಗಿದೆ. ಹೊಸತಾಗಿ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಆತನನ್ನು ಪ್ರಶ್ನಿಸಿದ್ದು, ಅಗತ್ಯ ಬಂದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ದಿಗಂತ್ಗೆ ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹೊರಗೆ ಹೋಗದಂತೆ ದಿಗಂತ್ಗೆ ಸೂಚಿಸಲಾಗಿದೆ.ಶೂಟಿಂಗ್ ಹೊರತು ಪಡಿಸಿ ಬೇರೆ ಪ್ರಯಾಣ ಕೈಗೊಳ್ಳುವುದಾದರೆ ಸಿಸಿಬಿಗೆ ತಿಳಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಚಾರಣೆ ವೇಳೆ ದಿಗಂತ್ ತಾನು ಸೆಲೆಬ್ರಿಟಿ ಆದ ಕಾರಣ ಕೆಲವೇ ಪಾರ್ಟಿಗಳಲ್ಲಿ ಭಾಗವಹಿಸಿದ್ದೆ ಎಂದಿದ್ದಾರೆ. ವಿಚಾರಣೆ ನಂತರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಕನ್ನಡ ಸುದ್ದಿ ವಾಹಿನಿಗಳು ತಮ್ಮ ಬಗ್ಗೆ ಪ್ರಸಾರ ಮಾಡುತ್ತಿರುವುದು ನಿಜವಲ್ಲ. ತನಿಖೆ ನಡೆಯುತ್ತಿರುವುದರಿಂದ, ಈ ಬಗ್ಗೆ ಏನೂ ಬಹಿರಂಗಪಡಿಸಬಾರದು ಎಂದು ಹೇಳಿದ್ದಾರೆ. ಮತ್ತೆ ಸಮನ್ಸ್ ಕಳಿಸಿದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿಚಾರಣೆಗೆ ಕರೆದರೆ ಮತ್ತೆ ಬರುತ್ತೇನೆ: ನಟ ದಿಗಂತ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.