ಕಿಚ್ಚ ಸುದೀಪ್ ನಟನೆಯ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಜೆರುಶಾ ಇದೀಗ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ.
‘ಆಕಾಶ್’, ‘ಅರಸು’ ಮುಂತಾದ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಜೆರುಶಾ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ‘ಅಪರೂಪ’ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದ ಮಹೇಶ್ ಬಾಬು ಅವರೀಗ ರಕ್ಷಿತ್ ಎಂಬುವವರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ‘ಮೆರವಣಿಗೆ’ ಸಿನಿಮಾ ಮೂಲಕ ಐಂದ್ರಿತಾ ರೇ, ‘ಚಿರು’ ಸಿನಿಮಾ ಮೂಲಕ ಕೃತಿ ಕರಬಂದ, ‘ಕ್ರೇಜಿ ಬಾಯ್’ ಮೂಲಕ ಆಶಿಕಾ ರಂಗನಾಥ್ ಹೀಗೆ ಹಲವು ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಮಹೇಶ್ ಬಾಬು ಅವರದ್ದು. ಜೆರುಶಾ ಅವರಿಗೆ ಬಣ್ಣದ ಲೋಕ ಹೊಸದೇನಲ್ಲ. ಬಾಲನಟಿಯಾಗಿ ನಟಿಸಿ, ಜಾಹೀರಾತುಗಳು ಮತ್ತು ರಂಗಭೂಮಿಯಲ್ಲೂ ಜೆರುಶಾ ಸಕ್ರಿಯರಾಗಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ನಟಿಯ ಆಯ್ಕೆಯಲ್ಲಿ ಮಹೇಶ್ ಬಾಬು ತೊಡಗಿದ್ದಾರೆ.
ಈ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದೆ. ಯೂತ್ಫುಲ್ ಎಂಟರ್ಟೈನರ್ ಕಥಾಹಂದರದ ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಚಿತ್ರಗ್ರಹಣವಿದೆ. ಬೆಂಗಳೂರು ಮತ್ತು ಸುತ್ತಮುತ್ತ ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದಿದೆ ಚಿತ್ರತಂಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.