ADVERTISEMENT

ಕಿಚ್ಚನ ಮನದ ಮಾತು ‘ನನ್ನ ಪಯಣ’

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 11:17 IST
Last Updated 12 ಜೂನ್ 2020, 11:17 IST
ಸುದೀಪ್‌ ಸಂವಾದದ ಪೋಸ್ಟರ್‌
ಸುದೀಪ್‌ ಸಂವಾದದ ಪೋಸ್ಟರ್‌   

ಸಿನಿಮಾ ಪ್ರಚಾರ, ಖಾಸಗಿ ಕಾರ್ಯಕ್ರಮ, ಟಿ.ವಿ ಸಂದರ್ಶನ, ಸ್ಟೇಜ್‌ ಶೋ ಹೀಗೆ ಒಂದಲ್ಲ ಒಂದು ಕಾರ್ಯಕ್ರಮ ಮುಖೇನ ಅಭಿಮಾನಿಗಳ ಜತೆಗೆ ಚಿತ್ರತಾರೆಯರುಮುಖಾಮುಖಿಯಾಗುತ್ತಿದ್ದರು, ಜತೆಗೆ ಸಂವಾದ ಕೂಡ ನಡೆಸುತ್ತಿದ್ದರು. ಆದರೆ,‌ಕೊರೊನಾ ಲಾಕ್‌ಡೌನ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿ ಇದಕ್ಕೆಲ್ಲ ಕಡಿವಾಣ ಹಾಕಿತ್ತು.

ಲಾಕ್‌ಡೌನ್‌ನಲ್ಲಿ ಸ್ವಯಂ ಹೋಂ ಕ್ವಾರಂಟೈನ್‌ ಆಗಿದ್ದ ತಾರೆಗಳು ಅಭಿಮಾನಿಗಳೊಂದಿಗೆ ಸಂವಾದ ನಡೆಸಲು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಲೈವ್‌ ಹಾಗೂ ಆನ್‌ಲೈನ್‌ ವರ್ಚ್ಯುವಲ್‌ ಮೀಟಿಂಗ್‌ ಮೊರೆ ಹೋಗುತ್ತಿರುವ ಟ್ರೆಂಡ್‌ ಈ ಅವಧಿಯಲ್ಲಿ ಹೆಚ್ಚುತ್ತಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಆನ್‌ಲೈನ್‌ ವರ್ಚ್ಯುವಲ್‌ ಮೀಟಿಂಗ್‌ ಮೂಲಕವೇ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಉಳಿಸಿಕೊಳ್ಳಲು ಮತ್ತು ವೃದ್ಧಿಸಿಕೊಳ್ಳಲು ಯತ್ನಿಸುತ್ತಲೂ ಇದ್ದಾರೆ.

ಯುನೈಟೆಡ್‌ ಕಿಂಗ್‌ಡಮ್‌ನಲ್ಲಿರುವ ಕನ್ನಡ ಬಳಗವುಇದೇ 13ರಂದು (ಶನಿವಾರ) ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಸುದೀಪ್‌ ಜತೆಗೆ ಮನದಮಾತು ‘ನನ್ನ ಪಯಣ’ ಎಂಬ ಬಹು ದೊಡ್ಡ ಆನ್‌ಲೈನ್‌ವರ್ಚ್ಯುವಲ್‌ ಮೀಟಿಂಗ್‌ ಆಯೋಜಿಸಿದೆ.

ADVERTISEMENT

ಯುಕೆ ಮತ್ತು ಯುರೋಪ್‌ ರಾಷ್ಟ್ರಗಳಲ್ಲಿರುವ ಅಭಿಮಾನಿಗಳೊಂದಿಗೆ ಈ ಲೈವ್‌ ಕಾರ್ಯಕ್ರಮದಲ್ಲಿಸುದೀಪ್‌ ಸಂವಾದ ನಡೆಸಲಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಪುರ, ಯುಎಇ ಸೇರಿ ಸುಮಾರು 18 ರಾಷ್ಟ್ರಗಳಲ್ಲಿನ ಕನ್ನಡಿಗರು ಈ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಅಭಿಮಾನಿಗಳೊಂದಿಗೆ ಸುದೀಪ್‌ ಅವರ ಆನ್‌ಲೈನ್‌ ವರ್ಚ್ಯುವಲ್‌ ಮೀಟಿಂಗ್‌ ನಡೆಯಲಿದೆ. (ನ್ಯೂಯಾರ್ಕ್ ಬೆಳಿಗ್ಗೆ 10.30), (ಲಂಡನ್‌ಮಧ್ಯಾಹ್ನ 3.30ಕ್ಕೆ), (ಆ್ಯಮ್‌ಸ್ಟರ್‌ಡ್ಯಾಂ ಸಂಜೆ 4.30ಕ್ಕೆ)‘ನನ್ನ ಪಯಣ’ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಸುದೀಪ್‌ ತಮ್ಮ ಬದುಕಿನ ಬಗ್ಗೆ ಅಭಿಮಾನಿಗಳೊಂದಿಗೆ ಮನಬಿಚ್ಚಿ ಮಾತನಾಡಲಿದ್ದಾರೆ.

ಫ್ಯಾಂಟಮ್‌ ಜುಲೈ 1ರಿಂದ ಶೂಟಿಂಗ್‌ ಶುರು:ಜುಲೈ 1ರಿಂದ ಫ್ಯಾಂಟಮ್‌ ಚಿತ್ರದ ಶೂಟಿಂಗ್‌ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಶುರುವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಶೂಟಿಂಗ್‌ ಶುರುಮಾಡಲು ಒಪ್ಪಿಕೊಂಡಿರುವ ನಟ ಸುದೀಪ್‌ ಅವರಿಗೂ ನಾನು ತುಂಬಾ ಆಭಾರಿಯಾಗಿದ್ದೇನೆ ಎನ್ನಲು ಫ್ಯಾಂಟಮ್‌ ಚಿತ್ರದ ನಿರ್ಮಾಪಕ ಜಾಕ್‌ ಮಂಜು ಮರೆಯಲಿಲ್ಲ.

ಜಾಕ್‌ ಮಂಜು ಸ್ಪಷ್ಟನೆ:ಕೊರೊನಾ ಪೂರ್ವದಲ್ಲಿ ನಮ್ಮ ಬದುಕು ಹೇಗಿತ್ತು; ಕೊರೊನೋತ್ತರ ಭಾರತದಲ್ಲಿ ಬದುಕು ಹೇಗಿರಬೇಕೆಂಬ ಅರಿವನ್ನು ಜನರಲ್ಲಿ ಮೂಡಿಸಲು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರತಂದ ‘ಬದಲಾಗು ನೀನು’ ದೃಶ್ಯರೂಪಕದಲ್ಲಿ ಸುದೀಪ್‌ ಕಾಣಿಸಿಕೊಳ್ಳದ ಬಗ್ಗೆ ಸುದೀಪ್‌ ಅವರ ಮ್ಯಾನೇಜರ್‌ ಆದ ಜಾಕ್‌ ಮಂಜು ಸ್ಟಷ್ಟನೆ ನೀಡಿದ್ದಾರೆ.

‘ದೃಶ್ಯ ರೂಪಕದಲ್ಲಿ ಪಾಲ್ಗೊಳ್ಳುವಂತೆ ಸುದೀಪ್‌ ಅವರಿಗೆ ಈ ದೃಶ್ಯರೂಪಕದ ಪರಿಕಲ್ಪನೆಯ ರೂವಾರಿಗಳಿಂದಆಹ್ವಾನ ಬಂದಿತ್ತು. ಆದರೆ, ಆ ಸಮಯದಲ್ಲಿ ಸುದೀಪ್‌ ಬೇರೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದರು. ಸುದೀಪ್‌ ಅವರಿಗೆ ನಾಡಿನ ಮೇಲೆ ಮತ್ತು ಅಭಿಮಾನಿಗಳ ಬಗ್ಗೆ ಅಪಾರ ಕಾಳಜಿ ಇದೆ. ಕೊರೊನಾ ಜಾಗೃತಿಗಾಗಿ ವಿವಿಧ ಸಂಘಸಂಸ್ಥೆಗಳು, ಟ್ರಸ್ಟ್‌ಗಳಿಗೆ ಸುದೀಪ್‌ ಅವರೇ ಸ್ವತಃ ಹದಿನೈದಕ್ಕೂ ಹೆಚ್ಚು ವಿಡಿಯೋ ಸಂದೇಶಗಳನ್ನು ಮಾಡಿಕೊಟ್ಟಿದ್ದಾರೆ’ ಎಂದು ಮಂಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.