ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪುನರ್ಜನ್ಮ, ಪ್ರೇಮಕಥೆ ಒಳಗೊಂಡ ‘ರುಧೀರ ಕಣಿವೆ’ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿದರು.
ನಟ ಧರ್ಮ ಕೀರ್ತಿರಾಜ್ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವವರು ಸಮರ್ಥ ಎಂ.
‘ಈ ಮೊದಲು ನಾನು ‘ನವ ಇತಿಹಾಸ’ ಸಿನಿಮಾ ನಿರ್ದೇಶಿಸಿದ್ದೆ. ಇದು 2ನೇ ಪ್ರಯತ್ನ. ಚಿತ್ರದಲ್ಲಿ ನಾಲ್ಕು ಫೈಟ್, ನಾಲ್ಕು ಹಾಡುಗಳಿದ್ದು, ಬೆಂಗಳೂರು, ರಾಮನಗರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಸದ್ಯ 5 ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗಿದೆ. ಡಿಸೆಂಬರ್ 30ರಂದು ಬಿಡುಗಡೆ ಆಗಲಿದೆ’ ಎಂದರು ಸಮರ್ಥ.
ನಂತರ ಮಾತನಾಡಿದ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್, ‘ನಿರ್ದೇಶಕರು ಕಥೆ ಹೇಳಿದಾಗ ಸಿನಿಮಾ ಮಾಡುವ ಆಸೆ ಬಂತು. ಈ ಚಿತ್ರದ ನಾಯಕ ಕಾರ್ತಿಕ್ ನಮ್ಮ ಅಣ್ಣನ ಮಗ. ಶ್ರೀಲಕ್ಷ್ಮಿ ನರಸಿಂಹ ಮೂವೀಸ್ ಬ್ಯಾನರ್ನಲ್ಲಿ ಮೊದಲಬಾರಿಗೆ ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಸಿನಿಮಾ ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗಿದೆ. ಕಥೆಯಲ್ಲಿ ಕಾಮಿಡಿ, ಹಾರರ್, ಆ್ಯಕ್ಷನ್ ಸೇರಿದಂತೆ ಎಲ್ಲಾ ಅಂಶಗಳಿದ್ದು, ಸಿನಿಮಾ ಜನರಿಗೆ ಇಷ್ಟವಾಗಲಿದೆ’ ಎಂದು ಹೇಳಿದರು.
ಈ ಚಿತ್ರದ ನಾಯಕನಾಗಿ ಯುವ ಪ್ರತಿಭೆ ಕಾರ್ತಿಕ್ ಅಭಿನಯಿಸಿದ್ದು, ಇವರಿಗೆ ನಾಯಕಿಯರಾಗಿ ದಿಶಾ ಪೂವಯ್ಯ ಹಾಗೂ ಅಮೃತಾ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜನೆ ಎ.ಟಿ ರವೀಶ್ ಅವರದ್ದು. ಲಕ್ಕಿ ಗೌಡ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಚಂದ್ರು ಬಂಡೆ ಮತ್ತು ಅಶೋಕ್ ಸಾಹಸವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.