2019ರ ಜನವರಿಯಲ್ಲಿ ಬಿಡುಗಡೆಯಾದ ‘ಎಫ್ 2’ (ಫನ್ ಅಂಡ್ ಫ್ರಸ್ಟ್ರೇಷನ್) ಸಿನಿಮಾ ಸಿನಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದು ಸುಳ್ಳಲ್ಲ. ವಿಕ್ಟರಿ ವೆಂಕಟೇಶ್ ಹಾಗೂ ವರುಣ್ ತೇಜ್ ಅಭಿನಯದ ಈ ಸಿನಿಮಾ ಟಾಲಿವುಡ್ ಬಾಕ್ಸ್ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾ ಹಿಟ್ ಆದ ಬೆನ್ನಲ್ಲೇ ‘ಎಫ್3’ ಸಿನಿಮಾ ಮಾಡುವುದಾಗಿ ನಿರ್ದೇಶಕ ಅನಿಲ್ ರವಿಪುಡಿ ಹೇಳಿಕೊಂಡಿದ್ದರು.
ಈ ನಡುವೆ ‘ಸರಿಲೇರು ನೀಕ್ವೆವರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಅನಿಲ್ ಈಗ ಮತ್ತೆ ಸಿನಿಮಾದ ಸ್ಕ್ರಿಪ್ಟ್ ರಚನೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಚಿಲುಕುರಿವರಿಯ ಗೆಸ್ಟ್ಹೌಸ್ನಲ್ಲಿ ತಮ್ಮ ತಂಡದೊಂದಿಗೆ ಸೇರಿ ಸ್ಕ್ರಿಪ್ಟ್ ತಯಾರಿಯಲ್ಲಿ ತೊಡಗಿದ್ದಾರೆ.
‘ಎಫ್2’ನಲ್ಲಿ ಅಭಿನಯಿಸಿದ್ದ ಸ್ಟಾರ್ ನಟರಾದ ವೆಂಕಟೇಶ್ ಹಾಗೂ ವರುಣ್ ತೇಜ್ ‘ಎಫ್3’ ಚಿತ್ರದಲ್ಲೂ ಅಭಿನಯಿಸಲಿದ್ದಾರೆ. ಆದರೆ ಈ ಚಿತ್ರದಲ್ಲಿ ಇನ್ನೂ ಒಬ್ಬ ನಟ ಅಭಿನಯಿಸಲಿದ್ದಾರೆಯೇ? ಎಂಬ ಪ್ರಶ್ನೆ ಸದ್ಯಕ್ಕೆ ಟಾಲಿವುಡ್ ಅಂಗಳದಲ್ಲಿ ಕುತೂಹಲ ಮೂಡಿಸುತ್ತಿದೆ.
‘ಕಥೆಯಲ್ಲಿ ಸದ್ಯಕ್ಕೆ ಮೂರನೇ ಹೀರೊ ಎಂಟ್ರಿಗೆ ಜಾಗವಿಲ್ಲ. ಆದರೆ ಮುಂದೆ ಅವಕಾಶ ಸಿಕ್ಕರೆ ಸಿನಿಮಾದ ದ್ವಿತಿಯಾರ್ಧದಲ್ಲಿ ಇನ್ನೊಬ್ಬ ನಟನ ಎಂಟ್ರಿಗೆ ಜಾಗ ಮಾಡಲು ಪ್ರಯ್ನತಿಸುತ್ತೇನೆ. ಈ ಬಗ್ಗೆ ನಮಗೇ ಇನ್ನೂ ಸ್ಪಷ್ಟನೆ ಇಲ್ಲ’ ಎನ್ನುವ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಹಾಗೇ ಉಳಿಯುವಂತೆ ಮಾಡಿದ್ದಾರೆ ನಿರ್ದೇಶಕ ಅನಿಲ್.
‘ಎಫ್3 ಚಿತ್ರವು ಎಫ್2 ಚಿತ್ರದ ಸಿಕ್ವೆಲ್ ಅಲ್ಲ. ಇದರಲ್ಲಿಯೂ ತಮನ್ನ ಭಾಟಿಯಾ ಹಾಗೂ ಮೆಹರಿನ್ ಕೌರ್ ಅಭಿನಯಿಸಲಿದ್ದು ಎಫ್2ಗೆ ಹೋಲಿಸಿದರೆ ಇದರಲ್ಲಿ ಇನ್ನೂ ಹೆಚ್ಚಿನ ಮನರಂಜನೆ ಇರಲಿದೆ’ ಎಂದಿದ್ದಾರೆ.
‘ಈ ಚಿತ್ರವೂ ಸಂಪೂರ್ಣ ಹಾಸ್ಯಮಯವಾಗಿದ್ದು, ಚಿತ್ರಕ್ಕೆ ಒಳ್ಳೆಯ ಪರಿಕಲ್ಪನೆ ಸಿಕ್ಕಿದೆ. ಮನರಂಜನೆ ಪ್ರಿಯರಿಗೆ ಇದು ಹಾಸ್ಯದ ರಸದೌತಣ ನೀಡುವುದರಲ್ಲಿ ಸಂಶಯವಿಲ್ಲ’ ಎನ್ನುವ ಮೂಲಕ ಎಫ್2ಗಿಂತಲೂ ಇದು ಜನರನ್ನು ಹೆಚ್ಚು ನಗಿಸಲಿದೆ ಎಂದಿದ್ದಾರೆ.
‘ಸರಿಲೇರು ನೀಕ್ವೆವರು’ ಸಿನಿಮಾದ ನಂತರ ಮತ್ತೆ ಮಹೇಶ್ ಬಾಬು ಜೊತೆ ಕೆಲಸ ಮಾಡಲು ಇಚ್ಚಿಸಿರುವ ಅನಿಲ್ ನಮ್ಮ ಮಗನಿಗೆ ಅಜಯ್ ಸೂರ್ಯನ್ಶ್ ಎಂದು ನಾಮಕರಣ ಮಾಡಿದ್ದಾರೆ. ಸರಿಲೇರು ಸಿನಿಮಾದಲ್ಲಿ ಮಹೇಶ್ ಬಾಬು ಪಾತ್ರದ ಹೆಸರು ಅಜಯ್ ಕೃಷ್ಣ ಎಂಬುದಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.