ಬೆಂಗಳೂರು: ಹಿರಿಯ ನಿರ್ದೇಶಕ ವೆಂಕಟಸ್ವಾಮಿ (63)ಭಾನುವಾರ ರಾತ್ರಿ ನಿಧನರಾದರು.
ನಿರ್ದೇಶಕ ಎಚ್ಎಂಕೆ ಮೂರ್ತಿ ಅವರ ಜೊತೆ ಸಹಾಯಕರಾಗಿ ಕೆಲಸ ಮಾಡಿದ್ದ ಅವರು, ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ‘ನಮ್ಮೂರ ಯಜಮಾನ (2002)’, ‘ಸಿಂಧು’ (1998), ‘ನನ್ ಲವ್ ಮಾಡ್ತಿಯಾ’ (2004) ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಅವರ ನಿರ್ಮಾಣದ ಕೊನೆಯ ಚಿತ್ರ ‘ಬಿರುಮಳೆ’ ಕಳೆದ ವರ್ಷವೇ ನಿರ್ಮಾಣ ಪೂರ್ಣಗೊಂಡಿತ್ತಾದರೂ ಕೋವಿಡ್ ಕಾರಣಕ್ಕೆ ಬಿಡುಗಡೆ ಆಗಿರಲಿಲ್ಲ.
‘ಸಣ್ಣ ಬಜೆಟ್ನಲ್ಲಿ ಪಕ್ಕಾ ಯೋಜನೆ ರೂಪಿಸಿ ಅತ್ಯುತ್ತಮ ಸಿನಿಮಾ ನಿರ್ಮಿಸುತ್ತಿದ್ದರು. ಕಲಾವಿದರನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ಳುತ್ತಿದ್ದರು. ವ್ಯವಸ್ಥಿತ ಕೆಲಸಗಳ ಶಿಸ್ತಿನ ವ್ಯಕ್ತಿತ್ವ ಅವರದ್ದು’ ಎಂದು ಅವರ ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಗಿರಿಜಾ ಲೋಕೇಶ್ ಸ್ಮರಿಸಿದರು.
‘ಇತ್ತೀಚೆಗೆ ಅವರಿಗೆ ಪಾರ್ಶ್ವವಾಯು ಉಂಟಾಗಿತ್ತು. ಕೈ ಮತ್ತು ಕಾಲಿನ ಸ್ವಾಧಿನ ಕಳೆದುಕೊಂಡಿದ್ದರು. ಅದರ ನಡುವೆಯೂ ಅವರು ತಮ್ಮ ನಿರ್ದೇಶನ ಕಾಯಕ ಮುಂದುವರಿಸಿದ್ದರು’ ಎಂದು ಗಿರಿಜಾ ಸ್ಮರಿಸಿದರು.
ವೆಂಕಟಸ್ವಾಮಿ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅಂತ್ಯಕ್ರಿಯೆ ಸೋಮವಾರ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.