ADVERTISEMENT

ಪಠಾಣ್‌ ದೇಶಭಕ್ತಿಯ ಚಿತ್ರ ಎಂದ ಶಾರೂಖ್‌ ಖಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2022, 5:43 IST
Last Updated 18 ಡಿಸೆಂಬರ್ 2022, 5:43 IST
   

‘ಬೆಷರಮ್‌’ ಹಾಡಿನಿಂದ ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿ ಬಾಯ್ಕಾಟ್‌ ಭೀತಿ ಎದುರಿಸುತ್ತಿರುವ ‘ಪಠಾಣ್‌’ ಸಿನಿಮಾ ದೇಶಭಕ್ತಿ ಸಾರುವ ಚಿತ್ರ ಎಂದು ಶಾರೂಖ್‌ ಖಾನ್‌ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಅಭಿಮಾನಿಗಳೊಂದಿಗೆ #AskSRK ಟ್ಯಾಗ್‌ನಲ್ಲಿ ಸಂವಾದ ನಡೆಸಿರುವ ಶಾರೂಖ್‌, ಸರಣಿ ಟ್ವೀಟ್‌ಗಳ ಮೂಲಕ ಸಿನಿಮಾ ಕುರಿತಾದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ದಿನದ 15 ನಿಮಿಷಗಳ ಕಾಲ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದ ಶಾರೂಖ್‌, ಬೇಷರಮ್‌ ಹಾಡಿನ ವಿವಾದ ಸೇರಿದಂತೆ ಅಭಿಮಾನಿಗಳ ಎಲ್ಲ ಪ್ರಶ್ನೆಗಳನ್ನು ಮುಕ್ತವಾಗಿ ಸ್ವೀಕರಿಸಿದರು.

ಅಭಿಮಾನಿಯೊಬ್ಬರು #AskSRK ಕಾರ್ಯಕ್ರಮ 15 ನಿಮಿಷಗಳ ಕಾಲ ಮಾತ್ರ ಏಕೆ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಶಾರೂಖ್‌, ಎಲ್ಲರಿಗೂ ಒಂದು 15 ನಿಮಿಷದ ಜನಪ್ರಿಯತೆ ಬೇಕು. ಪಠಾಣ್‌ ಕೂಡ ದೇಶಭಕ್ತಿಯ ಸಿನಿಮಾ. ಆದರೆ ಆ್ಯಕ್ಷನ್‌ ರೀತಿಯಲ್ಲಿದೆ ಎಂದು ಉತ್ತರಿಸಿದ್ದಾರೆ.

ADVERTISEMENT

ಶಾರೂಖ್‌ ಖಾನ್‌–ದೀಪಿಕಾ ಪಡುಕೋಣೆ ಅಭಿನಯಿಸಿರುವ ಪಠಾಣ್‌ ಜ.25ರಂದು ತೆರೆಗೆ ಬರಲಿದೆ. ಬೇಷರಮ್‌ ರಂಗ್‌ ಹಾಡಿನ ಮೂಲಕ ಕೇಸರಿ ಬಣ್ಣ ಅವಮಾನಿಸಿ, ಕೆಲವರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಒಂದು ಗುಂಪಿನವರು ಸಿನಿಮಾಗೆ ಬಾಯ್ಕಾಟ್‌ ಕರೆ ನೀಡಿದ್ದಾರೆ.

ಯಶ್‌ ‘ವಾವ್‌’ ಎಂದ ಶಾರೂಖ್‌
ಇದೇ ವೇಳೆ ಶಾರೂಖ್‌ ಹಲವು ನಟರ ಕುರಿತು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕೆಜಿಎಫ್‌ನ ರಾಕಿಂಗ್‌ ಸ್ಟಾರ್‌ ಯಶ್‌ ಅವರನ್ನು ‘ವಾವ್‌’ ಎಂದು ಬಣ್ಣಿಸಿದ್ದಾರೆ. ಆಯುಷ್ಮಾನ್‌ ಖುರಾನ ಪ್ರೀತಿಪಾತ್ರರು, ಹೃತಿಕ್‌ ರೋಷನ್‌ ಕುಟುಂಬದವರು, ಸಲ್ಮಾನ್‌ ಖಾನ್‌ ಅವರ ಭಜರಂಗಿ ಬಾಯಿ ಜಾನ್‌ ನೆಚ್ಚಿನ ಸಿನಿಮಾ ಎಂದಿದ್ದಾರೆ. ರಾಮ್‌ಚರಣ್‌ ಅತ್ಯಂತ ಪ್ರೀತಿಪಾತ್ರ ಎಂದು ಶಾರೂಖ್‌ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.