ADVERTISEMENT

ಫೆ.16ಕ್ಕೆ ‘ಶಾಖಾಹಾರಿ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 23:40 IST
Last Updated 12 ಫೆಬ್ರುವರಿ 2024, 23:40 IST
ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು 
ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು    

ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಸಂದೀಪ್ ಸುಂಕದ್ ನಿರ್ದೇಶಿಸಿರುವ ‘ಶಾಖಾಹಾರಿ’ ಸಿನಿಮಾ ಫೆ.16ರಂದು ತೆರೆಕಾಣಲಿದೆ. 

ಇತ್ತೀಚೆಗಷ್ಟೇ ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮ ನಡೆಯಿತು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಿರ್ದೇಶಕ ಸೂರಿ ಅಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ರಂಗಾಯಣ ರಘು ಅವರಿಗೆ ‘ಶಾಖಾಹಾರಿ’ ಚಿತ್ರತಂಡವು ‘ಅಭಿನಯಾಸುರ’ ಎಂಬ ಬಿರುದು ನೀಡಿ ಗೌರವಿಸಿತು. ಸಂದೀಪ್‌ ಅವರ ನಿರ್ದೇಶನದ ಈ ಚೊಚ್ಚಲ ಸಿನಿಮಾದಲ್ಲಿ ಮಲೆನಾಡಿನ ಸೊಗಡಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಕಥೆ ಹೊತ್ತ ಈ ಸಿನಿಮಾ ಒಂದಿಷ್ಟು ನಿಗೂಢ ಘಟನೆಗಳ ಸುತ್ತ ಹೆಣೆಯಲಾಗಿದೆ. ರಂಗಾಯಣ ರಘು ಅಡುಗೆ ಭಟ್ಟನಾಗಿ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ತಾರಾಬಳಗದಲ್ಲಿದ್ದಾರೆ. 

‘ಇಲ್ಲಿಯವರೆಗೆ 350 ಸಿನಿಮಾವಾಗಿದೆ. ಈ ರೀತಿ ಪಾತ್ರವನ್ನೇ ಮಾಡಬೇಕು ಎಂದು ನಾನು ಯೋಚಿಸಿಲ್ಲ. ನಮಗೆ ದೊಡ್ಮನೆಯಿಂದ ದೊಡ್ಡ ಆಶೀರ್ವಾದ ಸಿಕ್ಕಿದೆ. ಚಿತ್ರರಂಗದ ಎಲ್ಲ ನಟರ ಜೊತೆ ಸಿನಿಮಾ ಮಾಡಿದ್ದೇನೆ. ಹೊಸಬರ ಜೊತೆಯೂ ಸಿನಿಮಾ ಮಾಡುತ್ತಿದ್ದೇನೆ. ಚಿತ್ರರಂಗಕ್ಕೆ ಹೊಸಬರು ಮತ್ತಷ್ಟು ಬರಲಿ ಎನ್ನುವ ಬಯಕೆ ನನ್ನದು’ ಎಂದರು ರಘು. 

ADVERTISEMENT

ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ‘ಶಾಖಾಹಾರಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಚಿತ್ರಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಈ ಸಿನಿಮಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.