ADVERTISEMENT

‘ಸಿಂಧೂರ’ ಹಾಡುಗಳ ಬಿಡುಗಡೆ – ಕಥೆ ಹೀಗಿದೆ...

​ಪ್ರಜಾವಾಣಿ ವಾರ್ತೆ
Published 1 ಮೇ 2022, 9:45 IST
Last Updated 1 ಮೇ 2022, 9:45 IST
ನಿವೀಕ್ಷಾ ನಾಯ್ಡು, ಸಚಿನ್‌ ಪುರೋಹಿತ್‌, ಸುರಕ್ಷಿತಾ ಶೆಟ್ಟಿ
ನಿವೀಕ್ಷಾ ನಾಯ್ಡು, ಸಚಿನ್‌ ಪುರೋಹಿತ್‌, ಸುರಕ್ಷಿತಾ ಶೆಟ್ಟಿ   

‘ಸಿಂಧೂರ’ ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ ಶಂಕರ್, ಉಮೇಶ್‌ಬಣಕಾರ್ ಆಡಿಯೋ ಬಿಡುಗಡೆ ಮಾಡಿದರು.

‘ಸಿಂಧೂರ’ ತ್ರಿಕೋನ ಪ್ರೇಮಕಥೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನ ಪುರೋಹಿತ್ ತಂದೆ ದಿವಂಗತ ರಾಮ್‌ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯಿದು.

ಕ್ರಿಶ್ಚಿಯನ್ ಶಾಸಕನ ಮಗಳಿಗೆ ಮಧ್ಯಮ ವರ್ಗದ ಪ್ರಾಧ್ಯಾಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ಸಮಾನತೆಯನ್ನು ಕಾಣುವ ಶಾಸಕ, ಮಗಳ ವಿಷಯ ಬಂದಾಗ ತಿರುಗಿ ಬೀಳುತ್ತಾನೆ. ಮುಂದೆ ಜೀವನದಲ್ಲಿ ಮೇಲೆ ಬರುತ್ತೇನೆಂದು ಛಾಲೆಂಜ್ ತೆಗೆದುಕೊಂಡು ನಾಯಕ ಪಟ್ಟಣಕ್ಕೆ ಬರುತ್ತಾನೆ. ಆ ಸಮಯದಲ್ಲಿ ಮತ್ತೊಬ್ಬ ಹುಡುಗಿಯ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲೊಂದು ಉಪಕಥೆ ಹುಟ್ಟಿಕೊಳ್ಳುತ್ತದೆ. ಅಂತಿಮವಾಗಿ ಆತ ಯಾರಿಗೆ ಒಲಿಯುತ್ತಾನೆ ಎಂಬುದು ಸಿನಿಮಾ ಸಾರಾಂಶ.

ಶಾಸಕನ ಮಗಳಾಗಿ ನಿವೀಕ್ಷಾನಾಯ್ಡು, ಕಂಪೆನಿ ಕಾರ್ಯದರ್ಶಿಯಾಗಿ ಸುರಕ್ಷಿತಾ ಶೆಟ್ಟಿ ನಾಯಕಿಯರು. ತಾರಾಗಣದಲ್ಲಿ ಬ್ಯಾಂಕ್‌ ಜನಾರ್ದನ್‌, ರೇಖಾದಾಸ್, ರಾಂಪುರೋಹಿತ್, ಅರುಣ್‌ದೇವಸ್ಯ, ಜ್ಯೋತಿ ಮುರೂರು, ದಯಾನಂದ್‌ ನೀನಾಸಂ, ಶ್ರೀವಿಷ್ಣು, ಉಮಾಶಂಕರ್ ಮುಂತಾದವರು ನಟಿಸಿದ್ದಾರೆ. ಗೋವಾ, ಮಡಿಕೇರಿ, ಸಕಲೇಶಪುರ, ಬಾಗಲಕೋಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತವನ್ನು ಒದಗಿಸಿರುವುದು ಕಾರ್ತಿಕ್‌ ವೆಂಕಟೇಶ್. ಗಣೇಶ್‌ ರಾಜನ್ ಛಾಯಾಗ್ರಹಣ, ಅರವಿಂದ್‌ ಜೆ.ಪಿ ಸಂಕಲನ, ಅಶೋಕ್ ಸಾಹಸ, ಸೂರಿ - ಜೆ.ಪಿ.ಆರಾಧ್ಯ ನೃತ್ಯ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.