ADVERTISEMENT

ಭರತ –ಬಾಹುಬಲಿ ಕಥಾನಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 19:30 IST
Last Updated 9 ಜನವರಿ 2020, 19:30 IST
ಸಾರಾ ಹರೀಶ್
ಸಾರಾ ಹರೀಶ್   
""

ಭರತ ಮತ್ತು ಬಾಹುಬಲಿಯ ಕಥೆ ಎಲ್ಲರಿಗೂ ಗೊತ್ತು. ‘ಶ್ರೀಭರತ ಬಾಹುಬಲಿ’ ಚಿತ್ರದಲ್ಲಿ ಯುವಜನರ ತ್ಯಾಗ ಮತ್ತು ಹೊಂದಾಣಿಕೆಯ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ‘ಮಾಸ್ಟರ್‌ ಪೀಸ್‌’ ಸಿನಿಮಾ ನಿರ್ದೇಶಿಸಿದ್ದ ಮಂಜು ಮಾಂಡವ್ಯ. ಭರತನಾಗಿಯೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಐದು ಹಾಡುಗಳಿಗೆ ಸಾಹಿತ್ಯ ರಚಿಸಿರುವ ಅವರು ಒಂದು ಗೀತೆಗೆ ಧ್ವನಿಯೂ ಆಗಿದ್ದಾರೆ.

ಹಾಸ್ಯನಟ ಚಿಕ್ಕಣ್ಣ ಇದರಲ್ಲಿ ಬಾಹುಬಲಿಯ ಅವತಾರವೆತ್ತಿದ್ದಾರೆ. ತ್ಯಾಗವೇ ಈ ಚಿತ್ರದ ಕಥೆಯ ಜೀವಾಳ. ತ್ಯಾಗದ ವಿಷಯ ಬಂದಾಗ ಯುವಜನರು ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಕಾಮಿಡಿ ಮೂಲಕ ಹೇಳಲು ನಿರ್ದೇಶಕರು ಹೊರಟಿದ್ದಾರೆ.

ಸಾರಾ ಹರೀಶ್ ಮತ್ತು ಶ್ರೇಯಾ ಶೆಟ್ಟಿ ಈ ಚಿತ್ರದ ನಾಯಕಿಯರು. ಭರತನ ತಂದೆಯಾಗಿ ಶ್ರೀನಿವಾಸಮೂರ್ತಿ ಬಣ್ಣ ಹಚ್ಚಿದ್ದಾರೆ. ರಿಷಿ, ಅಚ್ಯುತ್‍ರಾವ್, ಶ್ರುತಿ ಪ್ರಕಾಶ್, ಕರಿಸುಬ್ಬು, ಪುಷ್ಪಸ್ವಾಮಿ, ನಿಖಿತಾ ದತ್ತೋಡಿ, ಭವ್ಯಾ, ತೇಜ್‍ರಾಜ್, ಜಾನ್‍ ಕೋಕೇನ್, ಅನಂತು, ಪ್ರಶಾಂತ್, ಪ್ರಖ್ಯಾತ್‌ ತಾರಾಗಣದಲ್ಲಿದ್ದಾರೆ.

ADVERTISEMENT

ಸಿನಿಮಾದ ಪ್ರಾರಂಭದ ಕಥೆಗೆ ನಟ ಉಪೇಂದ್ರ ಮುನ್ನುಡಿ ಹೇಳಿದ್ದಾರೆ. ಮಣಿಕಾಂತ್‍ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪರ್ವಿಜ್‌ ಅವರದು. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ವಿಜಯ್ -ಮಾಸ್‍ ಮಾದ -ವಿನೋದ್‌ ಸಾಹಸ ಸಂಯೋಜಿಸಿದ್ದಾರೆ. ನೃತ್ಯ ಕಲೈಕುಮಾರ್ -ಮುರಳಿ ಅವರದು. ಶಿವಕುಮಾರ್ -ಅರುಣ್‍ ಸಾಗರ್ ಅವರ ಕಲಾ ನಿರ್ದೇಶನವಿದೆ. ಶಿವಪ್ರಕಾಶ್‌ ಬಂಡವಾಳ ಹೂಡಿದ್ದಾರೆ.

ನಟ ಯಶ್‌ ಆಡಿಯೊ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಜನವರಿ 17ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ಕೋಟಿ ಮೊತ್ತದ ಬಹುಮಾನ
ಚಿತ್ರಮಂದಿರದತ್ತ ಜನರನ್ನು ಸೆಳೆಯಲು ಚಿತ್ರತಂಡ ವಿನೂತನ ಯೋಜನೆ ರೂಪಿಸಿದೆ. ಪ್ರೇಕ್ಷಕರಿಗೆ ₹ 1 ಕೋಟಿ ಬಹುಮಾನ ನೀಡಲು ನಿರ್ಧರಿಸಿದೆ.

ಚಿತ್ರದ ಬಿಡುಗಡೆಯಂದು ಥಿಯೇಟರ್‌ಗೆ ಬರುವ ಪ್ರತಿಯೊಬ್ಬರಿಗೂ ಟಿಕೆಟ್ ಜೊತೆಗೆ ಕೂಪನ್ ನೀಡಲಾಗುತ್ತದೆ. ಎರಡು ವಾರದವರೆಗೆ ಕೂಪನ್‌ ವಿತರಿಸಲಾಗುತ್ತದೆ. ಬಳಿಕ ಲಾಟರಿ ಮೂಲಕ ಆಯ್ಕೆಯಾಗುವ ಇಪ್ಪತ್ತು ಜನರಿಗೆ 10 ಕಾರು, ಚಿನ್ನ ನೀಡಲು ತೀರ್ಮಾನಿಸಿದೆ.

ಮಂಜು ಮಾಂಡವ್ಯ, ಶ್ರೇಯಾ ಶೆಟ್ಟಿ, ಚಿಕ್ಕಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.