ಹೊಸಬರು ನಿರ್ಮಿಸಿದ ‘ಸ್ಟ್ರೈಕರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿವೆ. ಈ ನಡುವೆಯೇ ಈ ವಾರ ನಟ ದರ್ಶನ್ ನಟನೆಯ ‘ಯಜಮಾನ’ ಚಿತ್ರವೂ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಹಾಗಾಗಿ, ಈ ಸಿನಿಮಾವನ್ನೂ ಥಿಯೇಟರ್ನಲ್ಲಿ ಉಳಿಸಿಕೊಳ್ಳಲು ಚಿತ್ರತಂಡ ಸಿದ್ಧತೆ ನಡೆಸಿದೆಯಂತೆ.
ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ನಿರ್ಮಾಪಕರಾದ ಜಿ. ಶಂಕರಪ್ಪ, ಸಿ. ರಮೇಶಬಾಬು ಮತ್ತು ಸುರೇಶ್ ಬಾಬು ಪ್ರೇಕ್ಷಕರ ಪ್ರತಿಕ್ರಿಯೆಗೆ ಧನ್ಯವಾದ ಅರ್ಪಿಸಿದರು. ಈ ವಾರದಿಂದ ದಾವಣಗೆರೆ ಮತ್ತು ಹುಬ್ಬಳ್ಳಿಗೆ ಪ್ರವಾಸಕೈಗೊಂಡು ಚಿತ್ರದ ಬಗ್ಗೆ ಮತ್ತಷ್ಟು ಪ್ರಚಾರ ನಡೆಸುವುದಾಗಿ ಹೇಳಿಕೊಂಡರು.
ನಿರ್ದೇಶನದ ಕನಸು ನನಸಾದ ಖುಷಿಯಲ್ಲಿದ್ದರು ನಿರ್ದೇಶಕ ಪವನ್ ತ್ರಿವಿಕ್ರಮ್. ‘ಚಿತ್ರ ಬಿಡುಗಡೆಗೂ ಮುನ್ನಾ ದಿನ ನನಗೆ ನಿದ್ರೆಯೇ ಬಂದಿರಲಿಲ್ಲ. ಬಿಡುಗಡೆಯಾದ ದಿನದಂದು ಮಧ್ಯಾಹ್ನದ ವೇಳೆ ಜನರ ಪ್ರತಿಕ್ರಿಯೆ ಕಂಡು ಖುಷಿಯಾಯಿತು’ ಎಂದರು.
ನಾಯಕ ನಟ ಪ್ರವೀಣ್ ತೇಜ್ ನಿರ್ದೇಶಕರಿಗೆ ಶೂಟಿಂಗ್ನಲ್ಲಿ ಸಾಕಷ್ಟು ಕಿರುಕುಳ ನೀಡಿದ್ದ ಬಗ್ಗೆ ಹೇಳಿಕೊಂಡರು. ‘ಬಹಳಷ್ಟು ಸಿನಿಮಾಗಳು ಶುರುವಾದಾಗ ಒಗ್ಗಟ್ಟು ಇರುತ್ತದೆ. ಚಿತ್ರ ತೆರೆಕಂಡಾಗ ಆ ಒಗ್ಗಟ್ಟು ಇರುವುದಿಲ್ಲ. ಮನಸ್ತಾಪ ಮನೆ ಮಾಡುತ್ತದೆ. ಸ್ಟ್ರೈಕರ್ ತಂಡದ ಎಲ್ಲರೂ ಒಟ್ಟಾಗಿರುವುದೇ ನನಗೆ ಖುಷಿ ತಂದಿದೆ’ ಎಂದರು.
ನಾಯಕಿ ಶಿಲ್ಪಾ ಮಂಜುನಾಥ್, ಸಂಗೀತ ಸಂಯೋಜಕ ಬಿ.ಜೆ. ಭರತ್, ಧರ್ಮಣ್ಣ ಅನುಭವ ಹಂಚಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.