
ಉತ್ತರ ಕರ್ನಾಟಕದ ಕಥೆಯನ್ನು ಹೊಂದಿರುವ ‘ಸೂರ್ಯ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸಾಗರ್ ದಾಸ್ ನಿರ್ದೇಶನದ ಚಿತ್ರಕ್ಕೆ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಬಂಡವಾಳ ಹೂಡಿದ್ದಾರೆ.
‘ಸ್ಲಂನಲ್ಲಿ ಬೆಳೆದ ಯುವಕನೊಬ್ಬ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ, ಆತನಿಗೆ ಯಾರೆಲ್ಲ ಸಹಾಯ ಮಾಡುತ್ತಾರೆ ಎಂಬುದು ಚಿತ್ರದ ಒಟ್ಟಾರೆ ಕಥೆ. ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಜನವರಿ 15ರಂದು ಚಿತ್ರ ಬಿಡುಗಡೆಗೊಳ್ಳಲಿದೆ. ಉತ್ತರ ಕರ್ನಾಟಕ, ಬೆಂಗಳೂರು ಸುತ್ತಮುತ್ತ ಹಾಗೂ ಪುಣೆಯಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ’ ಎಂದರು ನಿರ್ದೇಶಕ.
ಪ್ರಶಾಂತ್ಗೆ ಹರ್ಷಿತಾ ಜೋಡಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ, ಶ್ರುತಿ, ರವಿಶಂಕರ್, ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ ಪ್ರಸನ್ನ ಮುಂತಾದವರು ಚಿತ್ರದಲ್ಲಿದ್ದಾರೆ.
‘ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯ ಪಾತ್ರ ಮಾಡಿದ್ದೇನೆ. ಸ್ಲಂನಲ್ಲಿ ಬೆಳೆದ ಹುಡುಗನಿಗೆ ಬೆನ್ನೆಲುಬಾಗಿ ನಿಲ್ಲುವ ಬಾಂಡ್ ಬಸು ಪಾತ್ರ ನನ್ನದು’ ಎಂದರು ಪ್ರಮೋದ್ ಶೆಟ್ಟಿ.
ಐದು ಹಾಡುಗಳಿಗೆ ಶ್ರೀ ಶಾಸ್ತ ಅವರು ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯವಿದೆ. ಮನುರಾಜ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.