ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಆತುರದಲ್ಲಿಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಅದೊಂದು ಪೂರ್ವಭಾವಿ ನಿರ್ಧಾರವಾಗಿತ್ತು ಎನ್ನುತ್ತಾರೆ ನಟನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ.
ಹೌದು! ಆತ್ಮಹತ್ಯೆಗೂ ಮೂರು ದಿನ ಮುಂಚೆಯೇ ಸುಶಾಂತ್ ಸಿಂಗ್ ತಮ್ಮ ಎಲ್ಲ ಸಿಬ್ಬಂದಿಗೂ ಸಂಬಳ ಬಟವಾಡೆ ಮಾಡಿದ್ದರಂತೆ. ‘ಮುಂದಿನ ದಿನಗಳಲ್ಲಿ ನನ್ನಿಂದ ಸಂಬಳ ನೀಡಲು ಸಾಧ್ಯವಾಗದಿರಬಹುದು. ಬಹುಶಃ ಇದು ನಾನು ನೀಡುತ್ತಿರುವ ಕೊನೆಯ ಸಂಬಳ’ ಎಂಬ ಸಣ್ಣ ಸುಳಿವನ್ನೂ ಅವರು ತಮ್ಮ ಸಿಬ್ಬಂದಿಗೆ ನೀಡಿದ್ದರು.
ಕೊರೊನಾ ತಂದೊಡ್ಡಿದ ಸಂಕಷ್ಟದಿಂದ ಬಹುಶಃ ತಮ್ಮ ಮಾಲೀಕ ಹೀಗೆ ಹೇಳಿರಬಹುದು. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಕಲ್ಪನೆ ಇರಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಕೊರೊನಾ ಸಂಕಷ್ಟ ಸಮಯದಲ್ಲೂ ಮನೆಗೆಲಸದವರು ಮತ್ತು ಆಪ್ತ ಸಹಾಯಕ ಸಿಬ್ಬಂದಿಗೆ ಮಾಲೀಕ ಸುಶಾಂತ್ ಅವರು ಪೂರ್ಣ ಸಂಬಳ ನೀಡಿದ್ದರು. ನಮಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದರು. ಹಣಕಾಸು ನೆರವು ನೀಡಿದ್ದರು’ ಎಂದು ಸಿಬ್ಬಂದಿ ಹೇಳಿದ್ದಾರೆ.
‘ನೀವು ಯಾವುದೇ ಸಮಯದಲ್ಲಿ ಕರೆದರೂ ನಾವು ಬಂದು ಕೆಲಸ ಮಾಡಲು ಸಿದ್ಧ. ನೀವು ನಮಗಾಗಿ ಸಾಕಷ್ಟು ಮಾಡಿದ್ದೀರಿ. ಮನೆಯವರಂತೆ ನೋಡಿಕೊಂಡಿದ್ದೀರಿ’ ಎಂದು ಸಂಬಳ ಪಡೆಯುವಾಗ ತಿಳಿಸಿದ್ದಾಗಿ ಕೆಲಸದ ಸಿಬ್ಬಂದಿ ವಿಚಾರಣೆ ವೇಳೆಪೊಲೀಸ್ ತಿಳಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಕನಸು, ಮನಸ್ಸಿನಲ್ಲೂ ಎಣಿಸಿರಲಿಲ್ಲ ಎಂದು ಕಣ್ಣಿರು ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.