ADVERTISEMENT

ಸೋಲಿನಿಂದ ಹೊರಬರಲು ನಿತಿನ್‌ ಸರ್ಕಸ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 12:00 IST
Last Updated 30 ಜೂನ್ 2019, 12:00 IST
ನಿತಿನ್‌
ನಿತಿನ್‌   

ತೆಲುಗು ನಟ ನಿತಿನ್‌ ಅಭಿನಯದಮೂರು ಚಿತ್ರಗಳು ಸತತ ಸೋಲು ಕಂಡಿವೆ. ಹಾಗಿದ್ದರೂ ಈ ನಟನ ಜೊತೆ ಅಭಿನಯಿಸಲು ಖ್ಯಾತ ನಟಿಯರಾದ ರಾಕುಲ್‌ ಪ್ರೀತ್‌ಸಿಂಗ್‌, ಕೀರ್ತಿ ಸುರೇಶ್‌ ಹಾಗೂ ರಶ್ಮಿಕಾ ಮಂದಣ್ಣ ತುದಿಗಾಲಲ್ಲಿ ನಿಂತಿದ್ದಾರೆ.

ಇದೀಗ ಯೆಲೆಟಿ ಚಂದ್ರಶೇಖರನ್ ಅವರ ಇನ್ನೂ ಹೆಸರಿಡದ ಚಿತ್ರ, ವೆಂಕಿ ಕುಡುಮಲ ಅವರ ‘ಭೀಷ್ಮ’ ಹಾಗೂ ವೆಂಕಿ ಅಟ್ಲುರಿಯ ‘ರಂಗ್‌ ದೇ’ ಎಂಬ ಮೂರು ಚಿತ್ರಗಳಲ್ಲಿ ನಿತಿನ್‌ ನಾಯಕನಟನಾಗಿ ನಟಿಸುತ್ತಿದ್ದಾರೆ.

2002ರಲ್ಲಿ ತೇಜಾ ನಿರ್ದೇಶನದ ‘ಜಯಂ’ ಚಿತ್ರದ ಮೂಲಕನಿತಿನ್‌ ಸಿನಿಮಾ ಲೋಕಕ್ಕೆ ಪ್ರವೇಶಿಸಿದ್ದರು. 17 ವರ್ಷಗಳಲ್ಲಿ ‘ದಿಲ್‌’, ‘ಇಷ್ಕ್‌’, ‘ಅ ಆ’ದಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ಅವರು ನೀಡಿದ್ದರು. ಆದರೆ ಕಳೆದ ವರ್ಷ ಬಿಡುಗಡೆಯಾಗಿದ್ದ ‘ಲೈ’, ‘ಶ್ರೀನಿವಾಸ ಕಲ್ಯಾಣಂ’ ಸೇರಿದಂತೆ ಅವರ ಒಟ್ಟು ಮೂರು ಚಿತ್ರಗಳು ಬಾಕ್ಸಾಫೀಸಿನಲ್ಲಿ ಸೋಲು ಕಂಡಿವೆ. ಈ ಸೋಲಿನಿಂದ ಹೊರಬರಲು ನಿತಿನ್‌ಗೆ ಶೀಘ್ರ ಒಂದು ಸಿನಿಮಾ ಗೆಲುವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರು ತುಂಬ ಕಷ್ಟಪಡುತ್ತಿದ್ದಾರೆ.

ADVERTISEMENT

ಈಗ 13 ದಿನಗಳ ಅಂತರದಲ್ಲಿ ಮೂರು ದೊಡ್ಡ ಬಜೆಟ್‌ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದನ್ನು ನಿತಿನ್‌ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರಗಳನ್ನು ಪ್ರಸಿದ್ಧ ನಿರ್ದೇಶಕರೇ ನಿರ್ದೇಶಿಸುತ್ತಿದ್ದಾರೆ. ಹಾಗೇ ಖ್ಯಾತ ನಟಿಯರಾದ ರಾಕುಲ್‌ ಪ್ರೀತ್‌ ಸಿಂಗ್‌, ಕೀರ್ತಿ ಸುರೇಶ್‌, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ.

‘ಭೀಷ್ಮ’ದಲ್ಲಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ. ಜೂನ್‌ 11ರಂದು ಈ ಸಿನಿಮಾದ ಮುಹೂರ್ತ ನಡೆದಿತ್ತು. ‘ಈ ಚಿತ್ರ ನಿಮ್ಮೆಲ್ಲರನ್ನು ಮನರಂಜಿಸಲಿದೆ’ ಎಂದು ನಿತಿನ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಜೂನ್‌ 20ಕ್ಕೆ ಚಿತ್ರೀಕರಣ ಆರಂಭವಾದ ದಿನವೂ ಅವರು ಖುಷಿ ಹಂಚಿಕೊಂಡಿದ್ದರು.

ಜೂನ್‌ 22ರಂದು ‘ನಿತಿನ್‌28 ಮುಹೂರ್ತ ನಡೆಯಿತು. ಯೆಲೆಟಿ ಚಂದ್ರಶೇಖರ್‌ ಜೊತೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಈ ಚಿತ್ರ ತುಂಬಾ ವಿಶೇಷ. ರಾಕುಲ್‌ಪ್ರೀತ್‌ ಸಿಂಗ್‌ ಜೊತೆ ಕೊನೆಗೂ ಕೆಲಸ ಮಾಡುವ ಅವಕಾಶ ಸಿಕ್ಕಿತು. ಪ್ರಿಯಾ ಪ್ರಕಾಶ್‌ ವಾರಿಯರ್‌ ಸಹ ಮುಖ್ಯಪಾತ್ರದಲ್ಲಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದರು.ಇದಾದ ಎರಡನೇ ದಿನಕ್ಕೆ ನಿತಿನ್ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದರಲ್ಲಿ ಕೀರ್ತಿ ಸುರೇಶ್‌ ಅವರ ಜೊತೆ ಜೋಡಿಯಾಗಿ ನಟಿಸಲಿದ್ದಾರೆ.

ನಿತಿನ್ ಅವರು ಹೀಗೆ ಮೂರು ಚಿತ್ರಗಳನ್ನು ಒಮ್ಮೆಲೆ ಘೋಷಣೆ ಮಾಡಿರುವುದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅಚ್ಚರಿ ಮೂಡಿಸಿದೆ. ಈ ಮೂರೂ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವವರೆಲ್ಲ ಪ್ರಸಿದ್ಧ ನಟಿಯರು. ಅವರೆಲ್ಲ ಈ ಚಿತ್ರಗಳಿಗೆ ಸಹಿ ಹಾಕಲು ಏನು ಕಾರಣ? ಒಂದೋ ಅಧಿಕ ಸಂಬಾವನೆ ಇರಬಹುದು ಅಥವಾ ನಿರ್ವಹಿಸಲಿರುವ ಪಾತ್ರ ಆಸಕ್ತಿದಾಯಕವಾಗಿರಬಹುದು ಎಂದೆಲ್ಲ ಇಂಡಸ್ಟ್ರಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಮೂರು ನಟಿಯರಿಗೆ ದಕ್ಷಿಣ ಭಾರತದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಹೀಗಾಗಿ ನಿತಿನ್‌ ಸಿನಿಮಾದಲ್ಲಿ ಅವರಿದ್ದರೆ ಅಭಿಮಾನಿಗಳು ಅವರ ಸಿನಿಮಾವನ್ನು ನೋಡೇ ನೋಡುತ್ತಾರೆ. ಕತೆ ಹಾಗೂ ಪಾತ್ರಗಳು ಉತ್ತಮವಾಗಿದ್ದರೆ, ಮೂರು ಸಿನಿಮಾಗಳು ಹಿಟ್‌ ಆಗುವುದರಲ್ಲಿ ಎರಡು ಮಾತಿಲ್ಲ. ಆಗ ನಿತಿನ್‌ ಅವರಿಗೆ ಸಿನಿಮಾ ಸೋಲಿನಿಂದ ಮುಕ್ತಿ ದೊರೆತಂತಾಗುತ್ತದೆ ಎಂಬುದು ಸಿನಿಪ್ರಿಯರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.