ADVERTISEMENT

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ: ಪುಣೆ ಶೂಟರ್ ಮಹಾಕಾಲನ ತೀವ್ರ ವಿಚಾರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2022, 9:24 IST
Last Updated 9 ಜೂನ್ 2022, 9:24 IST
ಸಲ್ಮಾನ್ ಖಾನ್‌
ಸಲ್ಮಾನ್ ಖಾನ್‌   

ಪುಣೆ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಮ್ ಖಾನ್ ಅವರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಗಾಯಕ ಹಾಗೂ ಪಂಜಾಬ್ ಕಾಂಗ್ರೆಸ್ ನಾಯಕರಾಗಿದ್ದ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮೀಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶೂಟರ್ಸಿದ್ದೇಶ್ ಹಿರಾಮನ್ ಕಾಂಬ್ಳೆ ಅಲಿಯಾಸ್ ಮಹಾಕಾಲ ಎಂಬಾತನನ್ನುಸಲ್ಮಾನ್ ಖಾನ್ ಜೀವ ಬೆದರಿಕೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿದೆ.

ಗುರುವಾರ ಬೆಳಿಗ್ಗೆ ಪುಣೆಗೆ ಆಗಮಿಸಿದ ಮುಂಬೈ ಕ್ರೈಂ ಬ್ರ್ಯಾಂಚ್ ಡಿಸಿಪಿ ಸಂಗ್ರಾಮ್‌ ಸಿಂಗ್ ನೇತೃತ್ವದ ತಂಡ ಮಹಾಕಾಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.

ADVERTISEMENT

ಕಳೆದ ಭಾನುವಾರ ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್ ಬಳಿಯ ಬೆಂಚ್ ಒಂದರ ಮೇಲೆ ಲಾರೆನ್ಸ್‌ ಬಿಷ್ಣೋಯಿಗ್ಯಾಂಗ್‌ನ ಶಂಕಿತ ಅನಾಮಧೇಯ ವ್ಯಕ್ತಿಗಳು ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರವನ್ನು ಬಿಟ್ಟು ಹೋಗಿದ್ದರು. ಈ ಪತ್ರದ ಆಧಾರದ ಮೇಲೆ ಸಲ್ಮಾನ್ ತಂದೆ ಸಲೀಮ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಲಾರೆನ್ಸ್ ಬಿಷ್ಣೋಯ್ ಸಿಧು ಮೋಸೆವಾಲ್ ಹತ್ಯೆಯ ಮಾಸ್ಟರ್ ಮೈಂಡ್ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಅಲ್ಲದೇ ಇದೇ ಲಾರೆನ್ಸ್‌ ಸಹವರ್ತಿಗಳೇ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಮುಂಬೈ ಪೊಲೀಸರು ಈಗಾಗಲೇ ಸಲ್ಮಾನ್ ಖಾನ್ ಹಾಗೂ ಸಲೀಮ್ ಖಾನ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪುಣೆ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟರ್ ಸಂತೋಷ್ ಜಾಧವ್ ಎನ್ನುವನನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಈತ ಕೂಡ ಬಿಷ್ಣೋಯಿಗ್ಯಾಂಗ್ ಸದಸ್ಯ ಎಂದು ಹೇಳಲಾಗುತ್ತಿದೆ.

ಕಳೆದ ಮೇ 29 ರಂದು ಪಂಜಾಬ್‌ನಲ್ಲಿ ಸಿಧು ಮೂಸೇವಾಲಾ ಅವರನ್ನು ಹಂತಕರು ಗುಂಡಿನ ಮಳೆಗರೆದು ಹತ್ಯೆಗೈದಿದ್ದರು. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಸಂತೋಷ್ ಜಾಧವ್, ಮಹಾಕಾಲ್ ಸೇರಿದಂತೆ ಇತರ 7 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಲಾರೆನ್ಸ್‌ ಬಿಷ್ಣೋಯಿನನ್ನು ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.