ADVERTISEMENT

ತೆಲುಗು ಸಿನಿಮಾಗಳ ಚಿತ್ರೀಕರಣ ಆಗಸ್ಟ್ 1ರಿಂದ ಸ್ಥಗಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2022, 7:47 IST
Last Updated 18 ಜುಲೈ 2022, 7:47 IST
ಆರ್‌ಆರ್‌ಆರ್‌ ಸಿನಿಮಾದ ದೃಶ್ಯ
ಆರ್‌ಆರ್‌ಆರ್‌ ಸಿನಿಮಾದ ದೃಶ್ಯ   

ಹೈದರಾಬಾದ್‌: ಕೋವಿಡ್‌–19ನಿಂದಾಗಿ ಚಿತ್ರಮಂದಿರಗಳ ಆದಾಯ ಕುಸಿದಿದ್ದು, ಉತ್ಪಾದನಾ ವೆಚ್ಚಗಳು ಹಲವು ಪಟ್ಟು ಹೆಚ್ಚಾಗಿವೆ. ಇದನ್ನು ಪರಿಗಣಿಸಿ ತೆಲುಗು ಸಿನಿಮಾ ನಿರ್ಮಾಪಕರು ಚಿತ್ರೋದ್ಯಮಕ್ಕೆ ಪುನಶ್ಚೇತನ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಆಗಸ್ಟ್‌ 1ರಿಂದ ಎಲ್ಲಾ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಳಿಸುವ ಕುರಿತು ಆಲೋಚನೆ ನಡೆಯುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಸಾಕಷ್ಟು ತೆಲುಗು ನಿರ್ಮಾಪಕರು ಕಳೆದೆರಡು ದಿನಗಳಿಂದ ಹೈದರಾಬಾದ್‌ನಲ್ಲಿ ಸಭೆ ನಡೆಸುತ್ತಿದ್ದಾರೆ. ಉದ್ಯಮ ಉಳಿವಿಗೆ ನೆರವಾಗುವ ವಿಚಾರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾತುಕತೆ ನಡೆಸಿ, ತೀರ್ಮಾನ ಕೈಗೊಂಡಿದ್ದಾರೆ.

ಆಗಸ್ಟ್ 1ರಿಂದ ಸಿನಿಮಾಗಳ ಚಿತ್ರೀಕರಣ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳುವಂತೆತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೆ ತಿಳಿಸಲಾಗಿದೆ ಎಂದು ಖ್ಯಾತ ನಿರ್ಮಾಪಕರೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

'ಆರ್‌ಆರ್‌ಆರ್‌, ಕೆಜಿಎಫ್‌–2 ಹಾಗೂ ಇನ್ನೂ ಒಂದೆರಡು ಸಿನಿಮಾಗಳನ್ನು ಹೊರತುಪಡಿಸಿ ಚಿತ್ರಮಂದಿರಗಳ ಆದಾಯ ಶೇ 20 ರಷ್ಟು ಕುಸಿದಿದೆ. ಈಗಾಗಲೇ ಕೋವಿಡ್‌ನಿಂದ ತತ್ತರಿಸಿರುವ ಉದ್ಯಮಕ್ಕೆ ಇದು ಬಲವಾದ ಪೆಟ್ಟು ನೀಡಿದೆ. ಇಂತಹ ಸನ್ನಿವೇಶದಲ್ಲಿ ಉದ್ಯಮದ ಉಳಿವಿನ ಬಗ್ಗೆ ಪ್ರತಿಯೊಬ್ಬರೂ ಯೋಚಿಸುತ್ತಿದ್ದಾರೆ. ಇಡೀ ಉದ್ಯಮದ ಉಳಿವನ್ನು ಖಾತ್ರಿಪಡಿಸುವ ಪುನರ್‌ರಚನಾ (ಪುನಶ್ಚೇತನ) ಮಾರ್ಗಗಳನ್ನು ರೂಪಿಸಲು ನಿರ್ಮಾಪಕರು ಒಂದಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಯಾವುದೇ ಹೊಸ ಸಿನಿಮಾವನ್ನು 10 ವಾರಗಳ ವರೆಗೆ ಒಟಿಟಿ ವೇದಿಕೆಗಳಿಗೆ ಬಿಡುಗಡೆ ಮಾಡದಿರುವ ಮಹತ್ವದ ನಿರ್ಧಾರವನ್ನು ನಿರ್ಮಾಪಕರು ತೆಗೆದುಕೊಂಡಿದ್ದಾರೆ.

ಇದೀಗ, ದೊಡ್ಡ ನಟರ ಸಿನಿಮಾಗಳೂ ಮೂರೇ ವಾರಗಳಲ್ಲಿ ಒಟಿಟಿಗೆ ಬರುತ್ತಿವೆ. ಇದು ಚಿತ್ರಮಂದಿರಗಳ ಆದಾಯ ಕುಸಿಯಲು ಪ್ರಮುಖ ಕಾರಣವಾಗಿದೆ. ಇಂತಹ ಮಾರುಕಟ್ಟೆಯಲ್ಲಿ ಸಣ್ಣ ಬಜೆಟ್‌ ಸಿನಿಮಾಗಳಿಗೆ ಉಳಿಗಾಲವಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ಚರ್ಚೆ ನಡೆಸಿ ಮುಂದಿನ ಹಾದಿಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆಎಂದು ಮತ್ತೊಬ್ಬ ನಿರ್ಮಾಪಕರು ತಿಳಿಸಿದ್ದಾರೆ.

ಸಂಭಾವನೆ ಮೊತ್ತವನ್ನು ಕಡಿಮೆ ಮಾಡಿಕೊಳ್ಳುವ ಕುರಿತುಸ್ಟಾರ್‌ ನಟರು, ನಿರ್ದೇಶಕರ ಮನವೊಲಿಸುವ ಬಗ್ಗೆ ಚರ್ಚೆಯಾಗಿದೆ. ಇದೇ ವಿಚಾರವಾಗಿ ತಂತ್ರಜ್ಞರೊಂದಿಗೆ ಮಾತುಕತೆ ನಡೆಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ವಿಚಾರಗಳು ಇತ್ಯರ್ಥವಾಗುವವರೆಗೆ ಚಿತ್ರೀಕರಣ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಕೆಲವು ಮಾದ್ಯಮಗಳು ವರದಿ ಮಾಡಿವೆ.

ಅದೇರೀತಿ, ಚಿತ್ರೀಕರಣ ಸ್ಥಗಿತಗೊಳಿಸುವುದರಿಂದ ಮತ್ತಷ್ಟು ಸಮಸ್ಯೆಗಳು ತಲೆದೋರಬಹುದು ಎಂದು ಕೆಲವು ನಿರ್ಮಾಪಕರು ಆತಂಕ ವ್ಯಕ್ತಪಡಿಸಿರುವುದಾಗಿಯೂ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.