ADVERTISEMENT

‘ಉದ್ಘರ್ಷ’ ಟ್ರೇಲರ್‌ಗೆ ಸುದೀಪ್‌ ಧ್ವನಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 10:22 IST
Last Updated 7 ಫೆಬ್ರುವರಿ 2019, 10:22 IST
ಆರ್. ದೇವರಾಜ್, ಸುದೀಪ್‌ ಮತ್ತು ಸುನೀಲ್‌ ಕುಮಾರ್‌ ದೇಸಾಯಿ  
ಆರ್. ದೇವರಾಜ್, ಸುದೀಪ್‌ ಮತ್ತು ಸುನೀಲ್‌ ಕುಮಾರ್‌ ದೇಸಾಯಿ     

ಕನ್ನಡದ ಪ್ರೇಕ್ಷಕರಿಗೆ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳ ಹುಚ್ಚು ಹಿಡಿಸಿದ ನಿರ್ದೇಶಕ ಯಾರು? ಎಂಬ ಪ್ರಶ್ನೆಗೆ ಥಟ್ಟನೆ ಮನದಲ್ಲಿ ಮೂಡುವ ಹೆಸರು ಸುನೀಲ್ ಕುಮಾರ್ ದೇಸಾಯಿ. ‘ಉದ್ಘರ್ಷ’ ಚಿತ್ರದ ಮೂಲಕ ಮತ್ತೆ ಅವರು ಚಂದನವನದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವುದು ಗುಟ್ಟೇನಲ್ಲ. ದೇಸಾಯಿ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂದಾಕ್ಷಣ ‘ಸುದೀಪ್‌ ಅವರೊಟ್ಟಿಗೆ ಮತ್ತೆ ಯಾವಾಗ ಚಿತ್ರ ಮಾಡುತ್ತೀರಿ’ ಎಂದು ಅವರಿಗೆ ಕಿಚ್ಚನ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ.

ಈ ಬಾರಿ ದೇಸಾಯಿ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ನಟ ಸುದೀಪ್ ಅವರಿಂದ ‘ಉದ್ಘರ್ಷ’ ಚಿತ್ರದ ಟ್ರೇಲರ್‌ಗೆ ಸದ್ದಿಲ್ಲದೆ ಡಬ್ಬಿಂಗ್ ಮಾಡಿಸಿ ಮುಗಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಕಂಡು ಫುಲ್ ಖುಷಿಯಾಗಿರುವುದು ಸುದೀಪ್. ‘ನಾನು ಖುಷಿಯಿಂದಲೇ ಕಂಠದಾನ ಮಾಡಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಮೊನ್ನೆ ಹೈದರಾಬಾದ್‌ಗೆ ತೆರಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮತ್ತು ನಿರ್ಮಾಪಕ ಆರ್. ದೇವರಾಜ್ ಸುದೀಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಗೆ, ಅಲ್ಲಿಯೇ ಟ್ರೇಲರ್‌ಗೆ ಡಬ್ಬಿಂಗ್ ಮಾಡಿಸಿದ್ದಾರೆ.

ADVERTISEMENT

ನಾಲ್ಕು ಭಾಷೆಯಲ್ಲೂ ಸುದೀಪ್‌ ಅವರ ಧ್ವನಿಯೇ ಅನುರಣಿಸಲಿದೆ. ಇದು ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿರುವುದು ದಿಟ. ಕಿಚ್ಚನ ಜೊತೆಗೆ ತಮ್ಮ ಮುಂದಿನ ಚಿತ್ರವನ್ನು ನಿರ್ದೇಶನ ಮಾಡುತ್ತಾರೆಯೇ ಎನ್ನುವ ಕುತೂಹಲದ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

‘ಉದ್ಘರ್ಷ’ ಚಿತ್ರದ ನಾಯಕ ಠಾಕೂರ್ ಅನೂಪ್ ಸಿಂಗ್. ತಾನ್ಯಾ ಹೋಪ್, ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ತಾರಾಗಣದಲ್ಲಿದ್ದಾರೆ. ಜೊತೆಗೆ ವಂಶಿ ಕೃಷ್ಣ, ಕನ್ನಡಿಗ ಕಿಶೋರ್, ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಿವಂಗತ ವಿಷ್ಣುವರ್ಧನ್ ಹಾಗೂ ಖ್ಯಾತ ಛಾಯಾಗ್ರಹಕ ಪಿ. ರಾಜನ್ ಅವರ ಛಾಯಾಗ್ರಹಣವಿದೆ. ಸಂಗೀತ ಸಂಯೋಜಿಸಿರುವುದು ಬಾಲಿವುಡ್‌ ಖ್ಯಾತಿಯ ಸಂಜೋಯ್ ಚೌಧುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.