ವಿಜಯ್ ದೇವರಕೊಂಡ ನಟನೆಯ ವರ್ಲ್ಡ್ ಫೇಮಸ್ ಲವರ್ ಚಿತ್ರ ಈಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಫೆಬ್ರುವರಿ 14 ರ ಪ್ರೇಮಿಗಳ ದಿನದಂದು ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಬಂದಿರುವ ಬ್ರೇಕಿಂಗ್ ಸುದ್ದಿ ಎಂದರೆ ಈ ಚಿತ್ರದ ವಿತರಣೆಯ ಹೊಣೆ ಹೊತ್ತ ಚಡವಾಲದ ಶ್ರೀನಿವಾಸ ವಿತರಣೆಯಿಂದ ಹಿಂದೆ ಸರಿದಿದ್ದಾರೆ.
ಇವರು ₹24ಕೋಟಿಗೆ ಸಿನಿಮಾದ ಥಿಯೇಟರ್ ಹಕ್ಕನ್ನು ಪಡೆದುಕೊಂಡಿದ್ದರು. ಜೊತೆಗೆ ₹4ಕೋಟಿ ಮುಂಗಡ ಹಣವನ್ನು ನೀಡಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಸಿನಿಮಾ ವಿತರಣೆಯಿಂದ ಹಿಂದೆ ಸರಿದಿದ್ದು ನಿರ್ಮಾಪಕ ಕೆ. ಎಸ್. ರಾಮ ರಾವ್ ಬಳಿ ಬೇರೆ ವಿತಕರನ್ನು ಹುಡುಕಿಕೊಳ್ಳುವಂತೆ ತಿಳಿಸಿದ್ದಾರೆ. ಅದರೊಂದಿಗೆ ಮುಂಗಡ ಹಣವನ್ನು ಹಿಂದುರುಗಿಸಲು ಯಾವುದೇ ಒತ್ತಡವನ್ನು ಹೇರಿಲ್ಲ ಎಂಬುದು ತಿಳಿದುಬಂದಿದೆ.
ವಿಜಯ್ ನಟನೆಯ ಕೆಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದಿದ್ದರೂ ಕೂಡ ಸದ್ಯಕ್ಕೆ ಟಾಲಿವುಡ್ನಲ್ಲಿ ವಿಜಯ್ ಹಾಟ್ ಫೇವರಿಟ್ ಆಗಿದ್ದರು. ಹಾಗಿದ್ದೂ ಶ್ರೀನಿವಾಸ್ ರಾವ್ ಸಿನಿಮಾದ ಥಿಯೇಟರ್ ಹಕ್ಕಿನಿಂದ ಯಾವ ಕಾರಣಕ್ಕೆ ಹೊರ ನಡೆದರು ಎಂಬುದು ಮಾತ್ರ ನಿಗೂಢವಾಗೇ ಉಳಿದಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆಯಾಗಲಿದ್ದಾರೆ ಜಾಹ್ನವಿ
ಮೂಲಗಳ ಪ್ರಕಾರ ಆಂಧ್ರಪ್ರದೇಶದ ವಿತರಕರು ವರ್ಲ್ಡ್ ಫೇಮಸ್ ಲವರ್ ಸಿನಿಮಾಕ್ಕೆ ಯಾವುದೇ ಬಿಡ್ಗಳನ್ನು ಪಡೆಯಲು ಮುಂದೆ ಬಂದಿರಲಿಲ್ಲ. ಆ ಕಾರಣಕ್ಕೆ ಸಿನಿಮಾ ಬಗ್ಗೆ ಜನರಲ್ಲಿ ಅಷ್ಟೊಂದು ಒಲವಿರಕ್ಕಿಲ್ಲ ಎಂಬುದು ಚಡವಾಲದ ಅವರ ಅಭಿಪ್ರಾಯ. ಹಾಗಾಗಿ ವಿತರಣೆಯ ಹಕ್ಕಿನಿಂದ ಹೊರ ಬರಲು ಇದೇ ಸೂಕ್ತ ಸಮಯ ಎಂದು ಹೊರ ಬಂದಿದ್ದಾರೆ. ಸದ್ಯಕ್ಕೆ ಚಿತ್ರ ನಿರ್ಮಾಪಕರು ಬೇರೊಬ್ಬ ವಿತಕರರ ಹುಡುಕಾಟದಲ್ಲಿದ್ದಾರೆ. ಮುಂದೆ ಏಕ ವಿತರಕನಿಗೆ ಸಿನಿಮಾ ಹಕ್ಕನ್ನು ನೀಡುತ್ತಾರೋ ಅಥವಾ ಬೇರೆ ಬೇರೆ ಪ್ರಾಂತ್ಯದ ಬೇರೆ ಬೇರೆ ವಿತರಕರಿಗೆ ನೀಡುತ್ತಾರೋ ಕಾದು ನೋಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.