ADVERTISEMENT

‘ವಿಕ್ರಾಂತ್ ರೋಣ’ದಲ್ಲಿ ಕಿಚ್ಚ ಸುದೀಪ್‌ ‘ಗುಮ್ಮ’ನೇ? ಟೀಸರ್‌ನಲ್ಲೇನಿದೆ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 7:39 IST
Last Updated 2 ಏಪ್ರಿಲ್ 2022, 7:39 IST
ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್
ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್   

ಇಂದು (ಏ. 2) ಬಿಡುಗಡೆಯಾದ ಚಿತ್ರದ ಟೀಸರ್‌ ನೋಡಿದಾಗ ಹಾಗೊಂದು ಸಂದೇಹ ಮೂಡಿ ಮರೆಯಾಗುತ್ತದೆ. ಐದು ಮಂದಿ ಪುಟ್ಟ ಮಕ್ಕಳು ಅಜ್ಜಿಯ ಡೈರಿಯ ಹುಡುಕಾಟದಲ್ಲಿರುತ್ತಾರೆ. ಡೈರಿ ಸಿಗುವುದಿಲ್ಲ. ಬದಲಾಗಿ ಗೀಚು ಹಾಕಿರುವ ಹಳೆಯ ಕಾಗದವೊಂದು ಸಿಗುತ್ತದೆ. ಅದರಲ್ಲೇನೋ ಕಥೆಯಿದೆ ಎಂದು ಮಕ್ಕಳು ಮಾತನಾಡಿಕೊಳ್ಳುತ್ತಾರೆ.

ಅದೆಂಥ ಕಥೆ? ಭಯಾನಕ ಕಥೆ. ಅಂದರೆ ಅದರಲ್ಲಿ ಸಿಂಹ ಇದೆಯೇ? ಎಂದು ಒಬ್ಬ ಬಾಲಕಿ ಕೇಳುತ್ತಾಳೆ? ಸಿಂಹಕ್ಕಿಂತಲೂ ಭಯಂಕರ, ಚಿರತೆಗಿಂತಲೂ ವೇಗ, ಅವನು ಬಂದರೆ ಎಲ್ಲರಿಗೂ ಭಯವಾಗುತ್ತದೆ... ಎಂದು ಬಾಲಕ ವಿವರಣೆ ಕೊಡುತ್ತಾನೆ.

ಅಂದರೆ ಗುಮ್ಮನೇ? ಎಂದು ಬಾಲಕಿ ಪ್ರಶ್ನಿಸುತ್ತಾಳೆ.

ADVERTISEMENT

ಆಗ ಹಡಗಿನ ಮೇಲೆ ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಾರೆ. ಇಷ್ಟೇ ಕಥೆ ಹೇಳಿ ಟೀಸರ್‌ ಮುಕ್ತಾಯಗೊಳ್ಳುತ್ತದೆ.ಐದು ಭಾಷೆಗಳಲ್ಲಿ ಚಿತ್ರರಂಗದ ದಿಗ್ಗಜರು ಟೀಸರ್‌ ಬಿಡುಗಡೆ ಮಾಡಿದ್ದಾರೆ.

ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲಿಷ್‌ನಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್ ಲಾಲ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಇಂಗ್ಲಿಷ್‌ನಲ್ಲಿ ವೀರೇಂದ್ರ ಸೆಹ್ವಾಗ್ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

ಜುಲೈ 28ಕ್ಕೆ 3ಡಿ ರೂಪದಲ್ಲಿ ವಿಕ್ರಾಂತ್‌ ರೋಣ ಬಿಡುಗಡೆಯಾಗಲಿದ್ದಾನೆ.

ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಅವರು ಚಿತ್ರದ ನಿರ್ಮಾಪಕರು. ಅನೂಪ್‌ ಭಂಡಾರಿ ನಿರ್ದೇಶನವಿದೆ. ಬಿ. ಅಜನೀಶ್‌ ಲೋಕನಾಥ್‌ ಅವರ ಕಿಚ್ಚ ಸುದೀಪ್ ಜೊತೆ ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫೆರ್ನಾಂಡಿಸ್‌ ನಟಿಸಿದ್ದಾರೆ. ದುಬೈನ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.