ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರ ಅ.18ರಂದು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್ಕುಮಾರ್ ಮತ್ತು ಸುದೀಪ್ ಜತೆಯಾಗಿ ನಟಿಸಿರುವ ಕಾರಣಕ್ಕೆ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.
ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸುದೀಪ್, ಶಿವರಾಜ್ಕುಮಾರ್ಗೆ ಹೊಡೆಯುವ ದೃಶ್ಯವಿದೆ. ಇದರ ಕುರಿತು ಶಿವಣ್ಣನ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಶಿವರಾಜ್ಕುಮಾರ್ ಅವರಿಗೆ ಸರಿಯಾದ ಪಾತ್ರ ಇಲ್ಲ. ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದೂ ನಿರ್ದೇಶಕ ಪ್ರೇಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಸುದೀಪ್ ‘ಶಿವಣ್ಣ ಏನು ದಡ್ಡರಾ? ಮೂವತ್ತಾರು ವರ್ಷ ಚಿತ್ರರಂಗದಲ್ಲಿರುವ ಶಿವಣ್ಣ ಆ ಕಥೆ ಕೇಳಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಅಭಿಮಾನಿಗಳು ಆ ದೃಶ್ಯದ ಕುರಿತು ಪ್ರತಿಭಟನೆಗೆ ಇಳಿದರೆ ಅವರು ಶಿವಣ್ಣನ ನಿರ್ಧಾರವನ್ನು ಸಂದೇಹಿಸಿದ ಹಾಗಾಗುತ್ತದೆ’ ಎಂದಿದ್ದಾರೆ.
ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ಶುಕ್ರವಾರ ಮಾತನಾಡಿರುವ ಸುದೀಪ್, ‘ಒಂದೊಮ್ಮೆ ಶಿವಣ್ಣ ಅವರೇ ಈ ದೃಶ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದರೆ ಖಂಡಿತ ನಿರ್ದೇಶಕ ಪ್ರೇಮ್ ಅದನ್ನು ಕತ್ತರಿಸುತ್ತಾರೆ. ನಾವಿಬ್ಬರೂ ಕಥೆಯನ್ನು ಕೇಳಿ ಸಿನಿಮಾ ಮಾಡಿದ್ದೇವೆ. ನಮಗೆ ಇದರಲ್ಲಿ ಆಕ್ಷೇಪ ಏನೂ ಇಲ್ಲ. ಮಿಕ್ಕವರಿಗೆ ಏನಾದರೂ ಸಮಸ್ಯೆ ಇದ್ದರೆ ಅವರೇ ಬಗೆಹರಿಸಿಕೊಳ್ಳಬೇಕು’ ಎಂದೂ ಹೇಳಿದರು.
‘ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಸನ್ನಿವೇಶಗಳು ಇರುತ್ತವೆ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾ ಆಗಿಯೇ ನೋಡಲಿ. ವೈಯಕ್ತಿಕವಾಗಿ ತೆಗೆದುಕೊಂಡು ಅತಿರೇಕಕ್ಕೆ ಒಯ್ಯುವುದು ಸರಿಯಲ್ಲ’ ಎಂದು ಸುದೀಪ್ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.