ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಕನ್ನಡದ ‘ಅಮೃತಮತಿ’ ಚಿತ್ರವು ಆಯ್ಕೆಯಾಗಿದೆ.
ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರವು ಉತ್ತಮ ಚಿತ್ರ, ಉತ್ತಮ ನಿರ್ದೇಶಕ ಮತ್ತು ಉತ್ತಮ ನಟಿ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧಿಸಲಿದೆ.
13ನೇ ಶತಮಾನದ ಕನ್ನಡ ಕವಿ ಜನ್ನನಿಂದ ರಚಿತವಾದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಈ ಕಾವ್ಯದಲ್ಲಿ ಬರುವ ಅಮೃತಮತಿ ಪ್ರಸಂಗವನ್ನು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮರುಸೃಷ್ಟಿ ಮತ್ತು ಮರು ವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ. ಜತೆಗೆ ಚಿತ್ರಕಥೆ, ಸಂಭಾಷಣೆ ಹೊಸೆಯುವ ಜತೆಗೆ ಎರಡು ಗೀತೆಗಳನ್ನು ರಚಿಸಿದ್ದಾರೆ.
ಅಮೃತಮತಿ ಪಾತ್ರದಲ್ಲಿ ಬಹುಭಾಷಾ ನಟಿ ಹರಿಪ್ರಿಯ ಮತ್ತು ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಹಾಗೂ ಅಷ್ಟಾವಂಕನಾಗಿ ತಿಲಕ್ ನಟಿಸಿದ್ದಾರೆ. ತಾರಾಗಣದಲ್ಲಿ ಹಿರಿಯ ನಟ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ ಇದ್ದಾರೆ.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಮ್ಮ ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಸಂಸ್ಥೆಯಿಂದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ನಾಗರಾಜು ಆದವಾನಿ, ಸಂಗೀತ ನಿರ್ದೇಶನ ಶಮಿತಾ ಮಲ್ನಾಡ್, ಸಂಕಲನ ಸುರೇಶ್ ಅರಸು ಅವರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.