ಲಖನೌ: ಮೂತ್ರಪಿಂಡದ ಸೋಂಕಿನಿಂದಾಗಿ ಬಳಲಿ ಮುಂಬೈ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಅನುಪಮ್ ಶ್ಯಾಂ ಅವರ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ₹ 20 ಲಕ್ಷ ನೆರವು ಘೋಷಿಸಿದ್ದಾರೆ.
'ಮನ್ ಕಿ ಆವಾಜ್: ಪ್ರತಿಗ್ಯಾ' ಎಂಬ ಟಿವಿ ಶೋ ಮತ್ತು 'ಸ್ಲಮ್ಡಾಗ್ ಮಿಲಿಯನೇರ್' ಮತ್ತು 'ಬ್ಯಾಂಡಿಟ್ ಕ್ವೀನ್'ನಂತಹ ಚಲನಚಿತ್ರಗಳಲ್ಲಿ ನಟಿಸಿರುವ 62 ವರ್ಷದ ನಟ, ಉತ್ತರ ಮುಂಬೈ ಉಪನಗರದ ಅಪೆಕ್ಸ್ ಕಿಡ್ನಿ ಕೇರ್ನಲ್ಲಿ ಡಯಾಲಿಸಿಸ್ಗೆ ಹೋಗಿದ್ದ ವೇಳೆ ಹಠಾತ್ತನೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಜುಲೈ 27 ರಂದು ಗೋರೆಗಾಂವ್ನ ಲೈಫ್ಲೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವನ್ನು ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನುಪಮ್ ಶ್ಯಾಂ ಅವರ ಕುಟುಂಬವು, ನಟನ ಸ್ನೇಹಿತರು, ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ 'ಬೀಯಿಂಗ್ ಹ್ಯೂಮನ್ ಫೌಂಡೇಶನ್' ಅನ್ನು ಆರ್ಥಿಕ ಸಹಾಯ ಮಾಡುವಂತೆ ಕೋರಿದೆ ಮತ್ತು ಸಹನಟ ಮನೋಜ್ ಬಾಜಪೇಯಿ ಅವರಿಂದ ಕರೆ ಬಂದಿದೆ.
'ಆರ್ಥಿಕ ಬಿಕ್ಕಟ್ಟಿನಿಂದಾಗಿ ಅವರು ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ನಾನು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಸ್ನೇಹಿತರಿಗೆ ತಿಳಿಸಿದ್ದೇನೆ ಮತ್ತು ವೆಬ್ಸೈಟ್ ಮೂಲಕ ಬೀಯಿಂಗ್ ಹ್ಯೂಮನ್ ಅನ್ನು ಸಂಪರ್ಕಿಸಿದ್ದೇವೆ. ಮನೋಜ್ ಬಾಜಪೇಯಿ ಅವರಿಂದ ನನಗೆ ಕರೆ ಕೂಡ ಬಂದಿದ್ದು, ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ' ಎಂದು ನಟನ ಸಹೋದರ ಅನುರಾಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.