ADVERTISEMENT

ಭಾವನೆಗಳ ಗಾಳಿಪಟ್ಟ ಹಾರಿಬಿಟ್ಟ ಭಟ್ರು!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 6:59 IST
Last Updated 1 ಆಗಸ್ಟ್ 2022, 6:59 IST
ಯೋಗರಾಜ್‌ ಭಟ್ ಮತ್ತು ಗಣೇಶ್‌
ಯೋಗರಾಜ್‌ ಭಟ್ ಮತ್ತು ಗಣೇಶ್‌    

2008ರಲ್ಲಿ ‘ಮನದ ಮುಗಿಲಲ್ಲಿ ಮೊಹಬ್ಬತ್‌’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೊದಲ ‘ಗಾಳಿಪಟ’ವನ್ನು ಹಾರಿಬಿಟ್ಟಿದ್ದ ನಿರ್ದೇಶಕ ಯೋಗರಾಜ್‌ ಭಟ್‌ ಅವರು, ದಶಕದ ಬಳಿಕ ಮತ್ತೊಂದು ಭಾವನಾತ್ಮಕ ಗಾಳಿಪಟ ಹಾರಿಸಲು ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌ ಹಾಗೂ ಉಪೇಂದ್ರ ಅವರ ಸಮ್ಮುಖದಲ್ಲಿ ಭಾನುವಾರ ನಡೆದ ಅದ್ಧೂರಿಯಾದ ಪ್ರಿರಿಲೀಸ್‌ ಕಾರ್ಯಕ್ರಮದ ಬೆನ್ನಲ್ಲೇ, ‘ಗಾಳಿಪಟ–2’ ಸಿನಿಮಾದ ಟ್ರೇಲರ್‌ ಸೋಮವಾರ ಬಿಡುಗಡೆಯಾಗಿದೆ. ಟ್ರೇಲರ್‌ ಸಿನಿಮಾದ ಮೇಲೆ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

‘ಗಾಳಿಪಟ–2’ ಸಿನಿಮಾ ಆಗಸ್ಟ್‌ 12ಕ್ಕೆ ಬಿಡುಗಡೆಯಾಗುತ್ತಿದೆ. ‘ಸ್ನೇಹವೇ ಬಹಳ ಕೈಹಿಡಿದಿದೆ’ ಎಂದು ಸದಾ ಹೇಳುತ್ತಿರುವ ಯೋಗರಾಜ್‌ ಭಟ್‌ ಎರಡನೇ ಭಾಗದಲ್ಲೂ ಸ್ನೇಹದ ಮಳೆಯನ್ನು ಸುರಿಸಿದ್ದಾರೆ. ಮೂವರು ಗೆಳೆಯರ ಕಥೆಯನ್ನು ಭಾವನಾತ್ಮಕವಾಗಿ ಹೆಣೆದಿದ್ದಾರೆ ಎನ್ನುವುದಕ್ಕೆ ಟ್ರೇಲರ್‌ ಸಾಕ್ಷ್ಯ. ಮೊದಲ ಭಾಗದಲ್ಲೇ ಬರುವ ಬಹುತೇಕ ಪಾತ್ರಗಳು ಎರಡನೇ ಭಾಗದಲ್ಲೂ ಬಣ್ಣಹಚ್ಚಿದ್ದು, ಮತ್ತೊಂದಿಷ್ಟು ಹೊಸ ಪಾತ್ರಗಳು ಸೇರಿಕೊಂಡಿವೆ. ಚಿತ್ರದಲ್ಲಿ ಗಣೇಶ್‌ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಂಘಾಯಣ ರಘು, ಎರಡನೇ ಭಾಗದಲ್ಲೂ ಮಗನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಅನಂತನಾಗ್‌ ಅವರು ಇಲ್ಲಿ ಕನ್ನಡ ಮೇಸ್ಟ್ರಾಗಿದ್ದು, ‘ಕನ್ನಡ ಸಾಯುತ್ತೆ ಎನ್ನುವವರು ಬೇಗ ಸಾಯುತ್ತಾರೆ’ ಎನ್ನುತ್ತಾ ಮತ್ತೊಮ್ಮೆ ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡಿಗೆ ಪ್ರೇಕ್ಷಕರನ್ನು ಕೊಂಡೊಯ್ದಿದ್ದಾರೆ.

ADVERTISEMENT

ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡುಗಳು ಹಾಗೂ ಕ್ಯಾರೆಕ್ಟರ್‌ ಟೀಸರ್‌ ಹಿಟ್‌ ಆಗಿವೆ.ಅರ್ಜುನ್‌ ಜನ್ಯಾ ಅವರ ಸಂಗೀತ ಕೇಳುಗರನ್ನು ಮೋಡಿ ಮಾಡಿದೆ. ಎರಡನೇ ಭಾಗದಲ್ಲಿ ಗಣಿಗೆ ದೂದ್‌ಪೇಢ ದಿಗಂತ್‌, ಪವನ್ ಕುಮಾರ್ ಜೊತೆಯಾಗಿದ್ದಾರೆ. ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು ಹಾಗೂ ಸಂಯುಕ್ತ ಮೆನನ್‌ ಬಣ್ಣಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.