ಹೊಸಪೇಟೆ: ಬೆಳ್ಳಂಬೆಳಿಗ್ಗೆ ಅಲ್ಲೆಲ್ಲ ಜನ ನೆರೆದಿದ್ದರು. ಪ್ರತಿ ಕ್ಷಣವೂ ಅವರ ಕಾತುರ ಹೆಚ್ಚಾಗುತ್ತಿತ್ತು. ಮೊಬೈಲ್ನಲ್ಲಿ ಕ್ಯಾಮೆರಾ ಆನ್ ಮಾಡಿಕೊಂಡು ಸಿದ್ಧವಿದ್ದ ಅಲ್ಲಿನವರು ನೆಚ್ಚಿನ ನಟ ಬರುತ್ತಿದ್ದಂತೆ ಚಕಚಕನೆ ಕ್ಲಿಕ್ಕಿಸಿದರು. ಜನಜಂಗುಳಿ ನಡುವೆಯೇ ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರೆ, ಕೆಲವರಿಗೆ ಆ ಅವಕಾಶ ಕೈ ತಪ್ಪಿದ ಬೇಸರ.
ಇಲ್ಲಿನ ಮೇನ್ ಬಜಾರ್ನಲ್ಲಿ ಮಂಗಳವಾರ ನಡೆದ ನರ್ತನ ಡಾನ್ಸ್ ಅಂಡ್ ಫಿಟ್ನೆಸ್ ಸ್ಟುಡಿಯೊ ಉದ್ಘಾಟನೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳಿವು.
ಈ ಕಾರ್ಯಕ್ರಮದಲ್ಲಿ ನಟ, ಖಳನಟನಾಗಿ ಜನರ ಮನಗೆದ್ದಿರುವ ಕನ್ನಡ ಚಲನಚಿತ್ರ ತಾರೆ ವಸಿಷ್ಠ ಎನ್. ಸಿಂಹ ಅವರು ಬಂದಿದ್ದರು. ಅವರನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ಅಪಾರ ಸಂಖ್ಯೆಯ ಯುವಕರು ನೆರೆದಿದ್ದರು.
ವಸಿಷ್ಠ ಸಿಂಹ ಬರುತ್ತಿದ್ದಂತೆ ಕರತಾಡನ, ಶಿಳ್ಳೆ ಮುಗಿಲು ಮುಟ್ಟಿತ್ತು. ಸಿಂಹ ಪರ ಘೋಷಣೆಗಳು ಮೊಳಗಿದವು. ಹಾರ, ತುರಾಯಿ ಹಾಕಿ ಭವ್ಯ ಸ್ವಾಗತ ಕೋರಿದರು. ಅದನ್ನು ಸ್ವೀಕರಿಸಿದ ಸಿಂಹ, ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡದೆ ಅವರೊಂದಿಗೆ ನಿಂತು ಸೆಲ್ಫಿಗೆ ಪೋಸ್ ಕೊಟ್ಟು, ಖುಷಿಯಿಂದ ಹೆಜ್ಜೆ ಹಾಕಿದರು. ಅವರತ್ತ ಕೈ ತೂರಿದರು. ಈ ವೇಳೆ ಅಭಿಮಾನಿಗಳ ಸಂಭ್ರಮದ ಮೇರೆ ಮೀರಿತ್ತು.
ನಂತರ ಸ್ಟುಡಿಯೊ ಉದ್ಘಾಟಿಸಿದ ಸಿಂಹ, ‘ಯುವಕರು ಸೇರಿಕೊಂಡು ಸ್ಟುಡಿಯೊ ಆರಂಭಿಸಿರುವುದು ಖುಷಿಯ ವಿಚಾರ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹರಸಿದರು. ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ಧಾರ್ಥ ಸಿಂಗ್ ಕೂಡ ಇದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗಲೂ ಸಿಂಹ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.