ಅಂಜಲಿ ಅನೀಶ್
‘ಮುಂಗಾರ ಮಳೆ’ ನಿರ್ಮಾಪಕ, ನಿರ್ದೇಶಕ ಮತ್ತೆ ಒಂದಾಗಿ ಮಾಡಿದ ಚಿತ್ರ ‘ಮನದ ಕಡಲು’. ಬಹುತೇಕ ಹಳೆ ತಾಂತ್ರಿಕ ತಂಡವೇ ಇರುವುದರಿಂದ ನಿರೀಕ್ಷೆ ತುಸು ಹೆಚ್ಚೇ ಇತ್ತು. ‘ಮುಂಗಾರು ಮಳೆ’ ಧಾಟಿಯದ್ದೇ ಹಾಡುಗಳು, ದೃಶ್ಯಗಳು ಇದ್ದರೂ ಈ ಕಡಲು ಮನದಾಳಕ್ಕೆ ಇಳಿಯುವುದಿಲ್ಲ. ಮುಖ್ಯ ಕಾರಣ ಮತ್ತದೇ ಹಳೆಯ ಪ್ರೇಮಕಥೆ ಮತ್ತು ಹೊಸತೆನಿಸದ ನಿರೂಪಣೆ.
ವೈದ್ಯರ ಮೇಲೆ ನಂಬಿಕೆ ಕಳೆದುಕೊಂಡು ವೈದ್ಯಕೀಯ ಶಿಕ್ಷಣವನ್ನೇ ಬಿಟ್ಟುಬಂದ ಹುಡುಗ ಸುಮುಖ. ಕಡಲತೀರದಲ್ಲಿ ಆತನಿಗೆ ರಾಶಿಕಾ ಸಿಗುತ್ತಾಳೆ. ಅವಳ ಜೊತೆ ಜೊತೆಗೆ ಆಕೆಯ ಸ್ನೇಹಿತೆ ಅಂಜಲಿಯ ಪರಿಚಯವಾಗುತ್ತದೆ. ಅಲ್ಲಿಂದ ಪ್ರೇಮಕಥೆ ಪ್ರಾರಂಭ. ರಾಶಿಕಾಳ ಹಿಂದೆ ಬೀಳುವ ಸುಮುಖ, ಆಕೆಯನ್ನು ಹುಡುಕಿಕೊಂಡು ಕೋಟೆಯೊಂದಕ್ಕೆ ಹೋಗುತ್ತಾನೆ. ಅದು ಆದಿವಾಸಿಗಳಿರುವ ಜಾಗ. ಅಲ್ಲಿಂದ ಒಂದು ರೀತಿ ತ್ರಿಕೋನ ಪ್ರೇಮಕಥೆ.
ರಂಗಾಯಣ ರಘು ಪಾತ್ರ, ಗಿಬ್ರಿಶ್ ಭಾಷೆ, ನಡೆಯುವ ಸನ್ನಿವೇಶಗಳೆಲ್ಲ ಭಟ್ಟರ ಹಿಂದಿನ ಸಿನಿಮಾಗಳನ್ನು ನೆನಪಿಗೆ ತರುತ್ತವೆ. ಪಾತ್ರದ ಹೆಸರು ಮತ್ತು ಕಥೆ ನಡೆಯುವ ಸ್ಥಳವಷ್ಟೇ ಬದಲು! ಸಂತೋಷ್ ರೈ ಪತಾಜೆ ಛಾಯಾಚಿತ್ರಗ್ರಹಣ ಮತ್ತು ಅದಕ್ಕೆ ಸರಿಹೊಂದುವ ವಿ.ಹರಿಕೃಷ್ಣ ಹಿನ್ನೆಲೆ ಸಂಗೀತ ಚಿತ್ರದ ದೊಡ್ಡ ಶಕ್ತಿ. ಕಡಲು, ಕೋಟೆಯ ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ. ಹಾಸ್ಯದ ದೃಶ್ಯಗಳೊಂದಿಗೆ ನಗಿಸುವ ನಿರ್ದೇಶಕರ ಯತ್ನ ಫಲಿಸಿಲ್ಲ. ಸಾಕಷ್ಟು ಕಡೆ ಸುಮುಖ, ರಾಶಿಕಾ ನಟನೆಯಲ್ಲಿ ಇನ್ನಷ್ಟು ಪಳಗಬೇಕಿತ್ತು ಅನ್ನಿಸುತ್ತದೆ. ಅಂಜಲಿ ಇಷ್ಟವಾಗುತ್ತಾರೆ. ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.