ADVERTISEMENT

ರಂಗಭೂಮಿ, ಕಿರುತೆರೆ ನಟ ಹುಲಿವಾನ ಗಂಗಾಧರಯ್ಯ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 20:04 IST
Last Updated 18 ಜುಲೈ 2020, 20:04 IST
ಹುಲಿವಾನ ಗಂಗಾಧರಯ್ಯ
ಹುಲಿವಾನ ಗಂಗಾಧರಯ್ಯ   

ಬೆಂಗಳೂರು: ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಗಳಲ್ಲಿ ನಟಿಸಿರುವ ಹುಲಿವಾನ ಗಂಗಾಧರಯ್ಯ (70) ಶುಕ್ರವಾರ ರಾತ್ರಿ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೊರೊನಾ ಸೋಂಕು ತಗುಲಿತ್ತು.

ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ಹುಲಿವಾನದ ಅವರ ಜಮೀನಿನಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಸಲಾಯಿತು.

ಹುಲಿವಾನ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಅವರು, ವಿಜ್ಞಾನ ಪದವೀಧರರಾಗಿದ್ದರು. ‘ಗ್ಲೋಬ್‌ ಥಿಯೇಟರ್‌’ ಎಂಬ ರಂಗತಂಡವನ್ನು ಕಟ್ಟಿ, 55 ವರ್ಷ ಕಾಲ ರಂಗಸೇವೆಯಲ್ಲಿ ತೊಡಗಿದ್ದರು. ಶೂದ್ರ ತಪಸ್ವಿ, ಚೋಮ, ಆಸ್ಫೋಟ, ಪ್ರಚಂಡ ರಾವಣದಂತಹ ಹಲವು ನಾಟಕಗಳನ್ನು ಈ ರಂಗತಂಡ ಪ್ರದರ್ಶಿಸಿದೆ. ಕುವೆಂಪು ಅವರ ‘ಜಲಗಾರ’ ನಾಟಕವನ್ನು ಅವರೆದುರೇ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದರು. ‘ಧರ್ಮದ ಸೆರೆಯಿಂದ’ ನಾಟಕ ರಚಿಸುವ ಮೂಲಕ ನಾಟಕಕಾರರಾಗಿಯೂ ಗುರುತಿಸಿಕೊಂಡಿದ್ದರು.

ADVERTISEMENT

1981ರ ನಂತರ ದೂರದರ್ಶನಕ್ಕೆ ನಾಟಕಗಳನ್ನು ಮಾಡತೊಡಗಿದ್ದರು. ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದ ಅವರು, ‘ಸಂಕ್ರಾಂತಿ’, ‘ಮಹಾಯಜ್ಞ’, ‘ಮುಕ್ತ ಮುಕ್ತ’, ‘ಮಳೆ ಬಿಲ್ಲು’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದರು. ‘ಸೇಡಿನ ಹಕ್ಕಿ’ ಚಿತ್ರದೊಂದಿಗೆ ಸಿನಿಮಾ ರಂಗ ಪ್ರವೇಶಿಸಿದ್ದರು. ಡಾ. ರಾಜಕುಮಾರ್‌ ಸೇರಿದಂತೆ ಹಲವು ನಾಯಕರ ಜೊತೆ ಹಿರಿತೆರೆಯನ್ನು ಹಂಚಿಕೊಂಡಿದ್ದರು.

ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ‘ಕೊಕೊನಟ್‌ ಪ್ರೊಡ್ಯೂಸರ್ಸ್‌ ಕಂಪನಿ’ ಸ್ಥಾಪಿಸಿದ್ದರು. ನೀರಾಗೆ ಮಾರುಕಟ್ಟೆ ಕಲ್ಪಿಸಬೇಕು ಎಂಬ ಹೋರಾಟದಲ್ಲಿಯೂ ಸಕ್ರಿಯರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.