ADVERTISEMENT

ಕುರುಕ್ಷೇತ್ರದ ‘18 ದಿನಗಳು’ ನೃತ್ಯನಾಟಕ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:00 IST
Last Updated 28 ಆಗಸ್ಟ್ 2019, 20:00 IST
‘18 ದಿನಗಳು’ ನೃತ್ಯನಾಟಕದ ದೃಶ್ಯ
‘18 ದಿನಗಳು’ ನೃತ್ಯನಾಟಕದ ದೃಶ್ಯ   

ಬೆಂಗಳೂರಿನ ಪ್ರಭಾತ್‌ ಆರ್ಟ್ಸ್‌ ಇಂಟರ್‌ನ್ಯಾಷನಲ್‌ಕಲಾತಂಡವು ಮಹಾಭಾರತದ ಕುರುಕ್ಷೇತ್ರ ಯುದ್ಧದ 18 ದಿನಗಳ ರೋಚಕ ಸನ್ನಿವೇಶಗಳನ್ನು ಮೂಲವಾಗಿಟ್ಟುಕೊಂಡು ‘ಹದಿನೆಂಟು ದಿನಗಳು’ ಎಂಬ ವಿನೂತನ ನೃತ್ಯನಾಟಕವನ್ನು ನಗರದಲ್ಲಿಪ್ರದರ್ಶನ ಮಾಡಲಿದೆ.

ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1ರಂದು ಎರಡು ದಿನಗಳ ಕಾಲ ಜೆ.ಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನೃತ್ಯನಾಟಕದ ಪ್ರದರ್ಶನ ನಡೆಯಲಿದೆ.

ಈ ಹೊಸ ನೃತ್ಯನಾಟಕವನ್ನು ಭರತ್‌ ಆರ್‌. ಪ್ರಭಾತ್‌ ಹಾಗೂ ಶರತ್‌ ಆರ್‌. ಪ್ರಭಾತ್‌ ನಿರ್ದೇಶಿಸಿದ್ದಾರೆ. ಇದರ ರಚನೆ, ರಂಗವಿನ್ಯಾಸ, ಸಂಗೀತ ಸಂಯೋಜನೆ, ಪರಿಕಲ್ಪನೆ, ನೃತ್ಯ ಸಂಯೋಜನೆಯ ಜವಾಬ್ದಾರಿಯೂ ಅವರದೇ.ಈ ನೃತ್ಯ ನಾಟಕದಲ್ಲಿ ಸುಮಾರು 60 ಮಂದಿ ನೃತ್ಯಪಟುಗಳು ಹೆಜ್ಜೆ ಹಾಕಲಿದ್ದಾರೆ.

ADVERTISEMENT

ಇದು ಮಹಾಭಾರತದಿಂದ ಪ್ರೇರಿತಗೊಂಡು ರಚಿಸಿದ ನೃತ್ಯನಾಟಕ. ಇದರಲ್ಲಿ ಹದಿನೆಂಟು ದಿನಗಳ ಕಾಲ ನಡೆದ ಕುರುಕ್ಷೇತ್ರದ ಯುದ್ಧದ ದೃಶ್ಯಗಳು, ಒಬ್ಬೊಬ್ಬರ ಸಾಮರ್ಥ್ಯ, ಸಮರ ಕಲೆ, ಬುದ್ಧಿವಂತಿಕೆ, ಯುದ್ಧತಂತ್ರ ಇತ್ಯಾದಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ನೃತ್ಯ ನಾಟಕದ ಮೂಲಕ ಶ್ರೀಕೃಷ್ಣನ ಧರ್ಮದ ನಡೆಯನ್ನು ಸಾಕ್ಷಾತ್ಕರಿಸುವ ದರ್ಶನ ಮಾಡಲಾಗುತ್ತದೆ ಎಂದು ಪ್ರಭಾತ್‌ ನೃತ್ಯತಂಡ ಹೇಳಿದೆ.

ಹರಿತ ಹಾಗೂ ಚಮತ್ಕಾರಿ ಸಂಭಾಷಣೆಗಳಿಂದ ಮನಸೆಳೆಯುವ ಈ ನೃತ್ಯನಾಟಕವು ಆಧುನಿಕ ರಂಗಸಜ್ಜಿಕೆ, ತ್ರೀಡಿ ಆ್ಯನಿಮೇಷನ್‌, ಬೆಳಕಿನ ವಿನ್ಯಾಸ, ಏರಿಯಲ್‌ ತಂತ್ರಗಳನ್ನು ಒಳಗೊಂಡಿದೆ. ಇದಕ್ಕೆ ವಾದ್ಯ ಸಂಯೋಜನೆ ಮಾಡಿದವರು ಸಾತ್ವಿಕ್‌ ಚಕ್ರವರ್ತಿ ಹಾಗೂ ರೋಹಿತ್‌ ಭಟ್‌.

ಈ ಪ್ರದರ್ಶನದಲ್ಲಿ ಸಂಗ್ರಹವಾದ ಹಣವನ್ನು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನಿಧಿಗೆ ಕಳುಹಿಸಲಾಗುತ್ತದೆ. ಬುಕ್‌ ಮೈ ಶೋನಲ್ಲಿ ‘18 days' ಎಂದು ನಮೂದಿಸಿದರೆಟಿಕೆಟ್‌ ಲಭ್ಯ ಎಂದು ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.