
ಮಧ್ಯಮ ವರ್ಗದ ಕನಸುಗಳು, ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಅವರು ಪಡುವ ಪಡಿಪಾಟಲು, ಹೇಳುವ ಸುಳ್ಳುಗಳು ತೊಟ್ಟುಕೊಳ್ಳುವ ಮುಖವಾಡಗಳಿಗೆಲ್ಲ ಹಾಸ್ಯದ ಲೇಪ ಹಚ್ಚಿ ಎದುರಿಗಿಟ್ಟವರು ಬ್ರಿಟಿಷ್ ನಾಟಕಕಾರ ಪೀಟರ್ ಶಾಫರ್. ಅವರ ನಾಟಕ ‘ಬ್ಲಾಕ್ ಕಾಮಿಡಿ’ಯನ್ನು ಕನ್ನಡಕ್ಕೆ ರೂಪಾಂತರಿಸಿ ರಂಗರೂಪ ನೀಡಿ ರಂಗಕ್ಕೆ ತಂದವರು ಸುರೇಶ್ ಆನಗಳ್ಳಿ. ಅವರ ತಂಡ ‘ಅನೇಕ’ಕ್ಕಾಗಿ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.
‘ಮುಕುಲ್’ ಒಬ್ಬ ಯುವ ಕಲಾವಿದ. ‘ಕನಿಷ್ಠಾ’ ಆತನ ಹೊಸ ಗೆಳತಿ. ಹೇಗಾದರೂ ಮಾಡಿ ಕಲಾಕೃತಿಗಳನ್ನು ಮಾರಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬೇಕೆಂಬುದು ಈ ಜೋಡಿಯ ಆಸೆ. ಇವರ ಮನೆಗೆ ‘ಮಲ್ಯ’ ಬರಲಿದ್ದಾರೆ. ಅಗರ್ಭ ಶ್ರೀಮಂತ ಕಲಾಸಂಗ್ರಹಕಾರ ಮಲ್ಯರ ಮನ ಗೆಲ್ಲಲು ತನ್ನ ಹರಕು ಮುರುಕು ಮನೆಯನ್ನು ಪಕ್ಕದ ‘ಕಲಾಧರನ್’ ನ ಮನೆಯಿಂದ ಕದ್ದು ತಂದ ಫರ್ನಿಚರ್, ಕಲಾಕೃತಿಗಳಿಂದ ಸಿಂಗರಿಸಿದ್ದಾರೆ ಮುಕುಲ್. ಇನ್ನೇನು ಮಲ್ಯರು ಬರಲಿದ್ದಾರೆ ಎನ್ನುವಷ್ಟರಲ್ಲಿ ಕರೆಂಟ್ ಹೋಗಿ ಕತ್ತಲಾವರಿಸುತ್ತದೆ. ಕತ್ತಲ ಭಯ ತಪ್ಪಿಸಿಕೊಳ್ಳಲು ಮೇಲಿನ ಮನೆಯ ಪೂರ್ಣಿಮಾ ಕುಮಾರಿ ಇವರ ಜೊತೆಯಾಗುತ್ತಾಳೆ. ಕನಿಷ್ಠಾಳ ಅಪ್ಪ ಕರ್ನಲ್ ಕುಪ್ಪಣ್ಣನೂ ಎಂಟ್ರಿ ಕೊಡುತ್ತಾನೆ. ಎಲ್ಲ ಕತ್ತಲಲ್ಲಿ ತಡವರಿಸುತ್ತ ಒಡಾಡುತ್ತಿರುವಾಗಲೇ ಅದೆಲ್ಲೋ ಹೋಗಿದ್ದ ಕಲಾಧರನ್ ಅಚಾನಕ್ಕಾಗಿ ಇವರ ಮನೆಯನ್ನು ಹೊಕ್ಕಿಬಿಡುತ್ತಾನೆ. ನಿಜ ನಾಟಕ ಶುರುವಾಗುವುದು ಆಗಲೇ. ಕಳ್ಳತನ ಮುಚ್ಚಿಕೊಳ್ಳಲು ಕಲಾಧರನ್ ನ ಮನೆಯ ವಸ್ತುಗಳನ್ನು ಕತ್ತಲೆಯಲ್ಲೇ ತಿರುಗಿ ಸಾಗಿಸಬೇಕು. ಇನ್ನು ಮಲ್ಯ ಬಂದರೆ? ಎಲ್ಲ ಕಲಸು ಮೇಲೋಗರ. ಇನ್ನಷ್ಟು ತಲೆಬಿಸಿ ಹೆಚ್ಚಿಸುವ ಹಾಗೆ ಮುಕುಲ್ ನ ಹಳೆಯ ಪ್ರೇಯಸಿ ‘ವೀಣಾ’ ಇವರನ್ನ ಸೇರಿಕೊಳ್ಳುತ್ತಾಳೆ. ಕತ್ತಲ ಗೋಜಲುಗಳ ಮಧ್ಯೆ ಹುಸಿ ಸಂಬಂಧಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಸತ್ಯದ ಬೆಳಕು ಕಾಣತೊಡಗುತ್ತದೆ.
‘ನೀನು ಕತ್ತಲಲ್ಲೇ ಇರೋಕೆ ಇಷ್ಟಪಡೋನು. ಬೆಳಕಲ್ಲಿ ನಿನ್ನನ್ನು ಕಾಣೋಕೆ ಇಷ್ಟಪಡಲ್ಲ. ಯಾಕಂದ್ರೆ ಯಾರೂ ನಿನ್ನನ್ನು ಪ್ರೀತಿಸಲಾರರು ಎನ್ನೋ ಭಯ ನಿನಗೆ’ ಎನ್ನುವ ಕನಿಷ್ಠಾಳ ಮಾತು ಮಧ್ಯಮ ವರ್ಗದ ಯುವ ಜೀವಗಳ ಆತಂಕವನ್ನು ಎದುರಿಗೆ ತಂದಿಡುತ್ತದೆ.
ಪೀಟರ್ ಶಾಫರ್ ನ ‘ಬ್ಲಾಕ್ ಕಾಮಿಡಿ’ ಯನ್ನು ತುಂಬ ನಿಷ್ಠವಾಗಿ ಸುರೇಶ್ ಆನಗಳ್ಳಿ ಕನ್ನಡದ ಸಂದರ್ಭಕ್ಕೊಪ್ಪುವಂತೆ ರೂಪಾಂತರಿಸಿದ್ದಾರೆ. ತುಸು ವಿಸ್ತರಿಸಿಕೊಂಡಿದ್ದಾರೆ ಕೂಡ. ಇದಕ್ಕೆ ಮರುನಾಮಕರಣವೂ ಹುಷಾರಿತನದ್ದೇ. ಪೀಟರ್ ಶಾಫರ್ ನಿಧನರಾದಾಗ ‘ಬ್ರಾಡ್ ವೇ’ ಥಿಯೇಟರ್ ಅವರ ಗೌರವಾರ್ಥವಾಗಿ ದೀಪಗಳನ್ನು ಅರ್ಧ ಆರಿಸಿತ್ತು. ‘ಲೈಟ್ಸ್ ಆಫ್’ ಹೆಸರೂ ಅದಕ್ಕೆ ಅನುಗುಣವಾಗಿದೆ. ಇಂಥ ನಾಟಕಗಳ ಮಜಾ ಇರುವುದೇ ಅದರ ಸಂಭಾಷಣೆಗಳ ತೀವ್ರತೆಯಲ್ಲಿ. ಆನಗಳ್ಳಿ ಸಾಕಷ್ಟು ಚುರುಕಾಗಿಯೇ ಸಂಭಾಷಣೆ ಬರೆದಿದ್ದಾರೆ. ಅಪರೂಪದ ‘ಪನ್’ ನ ಜೊತೆಯಲ್ಲಿ ಅಲ್ಲಲ್ಲಿ ನುಸುಳುವ ಸಣ್ಣ ಪೋಲಿತನ ಕಚಗುಳಿಯಿಡುತ್ತದೆ.
ಈ ನಾಟಕ ಬೇರೆಲ್ಲ ನಾಟಕಗಳಿಗಿಂತ ತುಂಬ ವಿಭಿನ್ನವಾಗಿರುವುದು ಅದರ ‘ರಿವರ್ಸ್ ಲೈಟಿಂಗ್’ ನಿಂದ. ಮೂಲದಲ್ಲೇ ಶಾಫರ್ ಅದನ್ನು ಹೇಳಿಬಿಟ್ಟಿದ್ದಾನೆ. ಅದು ಹೇಗೆಂದರೆ, ಕೋಣೆಯಲ್ಲಿ ಕತ್ತಲು ಆವರಿಸಿದ ಸಂದರ್ಭದಲ್ಲಿ ರಂಗದಲ್ಲೆಲ್ಲ ಪ್ರಖರ ಬೆಳಕು. ಕೋಣೆ ಬೆಳಗಿದಾಗ ರಂಗದ ತುಂಬ ಕತ್ತಲು. ಬೆಳಕಿನ ಆಕರಗಳು ಕೋಣೆಗೆ ಹೊಕ್ಕಿದವೆಂದರೆ ರಂಗದಲ್ಲಿ ಮಂದ ಬೆಳಕು. ಇದೊಂಥರಾ ‘ಬೆಳಕಿನಾಟ’. ಒಂದು ರೀತಿಯಲ್ಲಿ ಬೆಳಕೇ ಈ ನಾಟಕದ ಹೀರೊ. ಇಂಥ ಬೆಳಕಿನಾಟವನ್ನು, ಅದರ ಸಮಯ ನಿಯಂತ್ರಣವನ್ನು ಅಪೂರ್ವ ಆನಗಳ್ಳಿ ಸಮರ್ಥವಾಗಿ ನಿಭಾಯಿಸಿದ್ದಾರೆ.
ಇದೊಂದು ‘ಆಂಗಿಕ ಹಾಸ್ಯ’ ದ ನಾಟಕ. ಹಾಗಾಗಿಯೇ ಇದು ‘ನಟ’ರ ನಾಟಕ ಕೂಡ. ಬೆಳಗಿದ ರಂಗದಲ್ಲೇ ಕತ್ತಲೆಯನ್ನು ಅನುಭವಿಸುತ್ತ, ಪರಿಕರಗಳಿಂದ ತುಂಬಿಹೋದ ರಂಗದಲ್ಲಿ, ಬೇರೆ ಬೇರೆ ಅಂತಸ್ತುಗಳನ್ನು ನಿಭಾಯಿಸುತ್ತ ಅಭಿನಯಿಸುವುದು ಮುಖ್ಯವಾಗಿ ಶರೀರವನ್ನು ದುಡಿಸಿಕೊಳ್ಳುವುದು ಸುಲಭದ ಮಾತಲ್ಲ. ಪ್ರತಿ ಕ್ಷಣದ ಎಚ್ಚರ ಕಾಪಿಟ್ಟುಕೊಂಡು, ತಡವರಿಸುತ್ತ, ಬೀಳುತ್ತ, ಏಳುತ್ತ ಭಾವಗಳನ್ನು ಅಭಿವ್ಯಕ್ತಿಸುವುದು ನಿಜಕ್ಕೂ ಸವಾಲು. ಇಂಥ ಸವಾಲನ್ನು ಎಲ್ಲ ನಟರೂ ಎದುರಿಸಿ ಗೆದ್ದಿದ್ದಾರೆ. ವಿವರವಾದ, ಹಲವು ಅಂತಸ್ತುಗಳ ರಂಗಸಜ್ಜಿಕೆ ನಾಟಕಕ್ಕೆ ಬಹು ಆಯಾಮ ಒದಗಿಸಿದೆ.
ಮುದ್ರಿತ ಸಂಗೀತ ಹಿತವಾಗಿದೆ. ನಾಟಕದಲ್ಲಿ ಬಳಸಿಕೊಂಡ ‘ಮಗುವಿನ ಗಾಡಿ’ ಕವನ ನೆಪಿನಲ್ಲಿ ಉಳಿಯುತ್ತದೆ. ನಾಟಕ ಎಲ್ಲೂ ಬೇಸರ ತರಿಸುವುದಿಲ್ಲವಾದರೂ ಇನ್ನೊಂದಿಷ್ಟು ಟ್ರಿಮ್ ಮಾಡಿದ್ದರೆ ಇನ್ನೂ ಮಜಾ ಬರುತ್ತಿತ್ತೇನೋ ಅನಿಸದಿರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.