ADVERTISEMENT

Bigg Boss: ಅತ್ಯುತ್ತಮ ಸ್ಪರ್ಧಿ ಈಗ ಕಳಪೆ! ಸಾನ್ಯಾ ನಸೀಬು ಬದಲಾಗಿದ್ದು ಹೇಗೆ?

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 8:33 IST
Last Updated 29 ಅಕ್ಟೋಬರ್ 2022, 8:33 IST
   

ಬೆಂಗಳೂರು: ಬಿಗ್ ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಯಲ್ಲಿ ಅರ್ಹತೆ ಗಿಟ್ಟಿಸಿ ಟೆಲಿವಿಜನ್ ಆವೃತ್ತಿಗೆ ಪ್ರವೇಶ ಪಡೆದಿದ್ದ ಸಾನ್ಯಾ ಅಯ್ಯರ್ 5ನೇ ವಾರ ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದಾರೆ.

ಹೌದು, ನಾಲ್ಕನೇ ವಾರ ಅತ್ಯುತ್ತಮ ಸ್ಪರ್ಧಿ ಎನಿಸಿಕೊಂಡಿದ್ದ ಅವರ ನಸೀಬು ಒಂದೇ ವಾರದಲ್ಲಿ ಬದಲಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು, ಅವರು ನಿರ್ವಹಿಸಿದ ಕ್ಯಾಪ್ಟನ್ ಜವಾಬ್ದಾರಿ.

ನಾಲ್ಕನೇ ವಾರ, ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರು ಅರ್ಹವಾಗಿಯೇ ಕ್ಯಾಪ್ಟನ್ ಮತ್ತು ಅತ್ಯುತ್ತಮ ಸ್ಪರ್ಧಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಆದರೆ, ನಾಯಕಿಯಾಗಿದ್ದಾಗ ಅವರು ತೆಗೆದುಕೊಂಡ ನಿರ್ಧಾರಗಳು ಅವರನ್ನು ಕಳಪೆ ಪಟ್ಟಕ್ಕೆ ತಂದು ಕೂರಿಸಿದವು.

ADVERTISEMENT

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆ ಮನೆಯಿಂದ ಬಂದಿದ್ದ ಗಿಫ್ಟ್‌ಗಳನ್ನು ಪಡೆಯಲು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಟಾಸ್ಕ್‌ನಲ್ಲಿ ಗೆದ್ದರೆ ಮಾತ್ರ ಅವರು ಮನೆಯಿಂದ ಬಂದಗಿಫ್ಟ್ ಪಡೆಯಬಹುದಿತ್ತು. ಜೊತೆಗೆ, ಅತಿ ಹೆಚ್ಚು ಟಾಸ್ಕ್ ಗೆದ್ದವರು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹತೆ ಪಡೆಯುತ್ತಾರೆ ಎಂಬ ಆಫರ್ ಕೂಡ ಇತ್ತು.

ಈ ಟಾಸ್ಕ್‌ಗಳನ್ನು ಆಡಿಸುವ ಹೊಣೆ ಹೊತ್ತಿದ್ದ ನಾಯಕಿ ಸಾನ್ಯಾ ಅಯ್ಯರ್, ಬಿಗ್ ಬಾಸ್ ನೀಡಿದ್ದ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು.

ಗಿಫ್ಟ್‌ ಪಡೆಯುವ ಟಾಸ್ಕ್‌ನಲ್ಲಿ ನಿಮ್ಮ ಬದಲು ಬೇರೆಯವರು ಆಡಿ ನಿಮಗೆ ಗಿಫ್ಟ್ ಕೊಡಿಸಬೇಕು ಎಂದು ಹೇಳಿದ್ದರು. ಇದನ್ನೇ ನಂಬಿಕೊಂಡು ಮೊದಲಿಗೆ ಪ್ರಶಾಂತ್ ಸಂಬರಗಿ ಮತ್ತು ಅಮೂಲ್ಯ ಪರವಾಗಿ ದೀಪಿಕಾ ದಾಸ್ ಟಾಸ್ಕ್ ಆಡಿದ್ದರು. ಆದರೆ, ಈ ಇಬ್ಬರೂ ಆಟದಲ್ಲಿ ಗೆಲುವು ಸಾಧಿಸಲಿಲ್ಲ. ಹೀಗಾಗಿ, ಅಮೂಲ್ಯ ಮತ್ತು ಸಂಬರಗಿಗೆ ಭಾರಿ ನಿರಾಸೆಯಾಯಿತು.

ಈ ಮಧ್ಯೆ, ರೂಪೇಶ್ ರಾಜಣ್ಣ ಪರ ಆಡಿದ ಅನುಪಮಾ ಗೌಡ ಮತ್ತು ನೇಹಾ ಗೌಡ ಅವರು ದಿವ್ಯಾ ಉರುಡುಗ ಪರ ಆಡಿ ಟಾಸ್ಕ್ ಗೆದ್ದು ಗಿಫ್ಟ್ ಪಡೆಯುವಂತೆ ಮಾಡಿದರು.

ಈ ಸಂದರ್ಭ ತಮ್ಮ ಆಟವನ್ನು ತಾವೇ ಆಡಿ ಗೆದ್ದು ಗಿಫ್ಟ್ ಪಡೆಯೋಣ ಎಂಬ ಚರ್ಚೆ ಆರಂಭವಾಯಿತು. ನಮ್ಮ ಟಾಸ್ಕ್ ಬೇರೆಯವರು ಆಡಬೇಕೆಂದು ಬಿಗ್ ಬಾಸ್ ಹೇಳಿಲ್ಲ ಎಂಬ ವಾದ ಮುಂದಿಟ್ಟರು. ಈ ಸಂದರ್ಭ ರಾಜಣ್ಣ ನನ್ನ ಟಾಸ್ಕ್ ಬೇರೆಯವರಿಗೆ ಬಿಟ್ಟುಕೊಟ್ಟಿದ್ದೆ. ಹೀಗಾಗಿ, ನನಗೆ ಎರಡನೇ ಅವಕಾಶ ಕೊಡಿ. ಇಲ್ಲವಾದರೆ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.

ಈ ಮಾತನ್ನು ಕೇಳಿದ ಅರುಣ್ ಸಾಗರ್, ನೀನು ಮನೆಯಿಂದ ಬಂದ ಗಿಫ್ಟ್ ಪಡೆದಿದ್ದೀಯಾ.. ಕ್ಯಾಪ್ಟನ್ಸಿ ಟಾಸ್ಕ್ ಸಹ ಆಡಬೇಕೆಂಬ ದುರಾಸೆ ಏಕೆ ಎಂದು ಕೇಳಿದರು. ಇದು ದುರಾಸೆ ಅಲ್ಲ ಕ್ಯಾಪ್ಟನ್ ಆದರೆ ಇಮ್ಯುನಿಟಿ ಸಿಗುತ್ತೆ ಎಂದು ಹೇಳಿದರು. ಇದಕ್ಕೊಪ್ಪದ ಸಂಬರಗಿ, ನನಗೆ ಮನೆಯ ಗಿಫ್ಟ್ ಸಹ ಸಿಕ್ಕಿಲ್ಲ. 3 ಅವಕಾಶ ಕೊಡಿ ಎಂದು ಆಗ್ರಹಿಸಿದರು. ತನ್ನ ತಪ್ಪು ಒಪ್ಪಿಕೊಂಡ ಕ್ಯಾಪ್ಟನ್ ಸಾನ್ಯಾ ನನ್ನ ಟಾಸ್ಕ್ ಬೇರೆಯವರಿಗೆ ಬಿಟ್ಟುಕೊಡುವುದಾಗಿ ಘೋಷಿಸಿದರು. ಹೀಗೆ ಸಾನ್ಯಾ ಮಾಡಿದ ಎಡವಟ್ಟು ಮನೆಯ ಸದಸ್ಯರ ನಡುವೆ ಭಾರೀ ಗೊಂದಲ ಮತ್ತು ಜಗಳಕ್ಕೆ ಕಾರಣವಾಗಿತ್ತು.

ಇದನ್ನೇ ಕಾರಣ ಮಾಡಿದ ಮನೆಯ ಸದಸ್ಯರು ಸಾನ್ಯಾ ಅವರಿಗೆ ಕಳಪೆ ಪಟ್ಟ ಕೊಟ್ಟರು. ಅವರ ಗೆಳೆಯ ರೂಪೇಶ್ ಶೆಟ್ಟಿ ಸಹ ಸಾನ್ಯಾ ತಿದ್ದಿಕೊಳ್ಳಲಿ ಎಂಬ ಕಾರಣ ನೀಡಿ ಕಳಪೆ ಪಟ್ಟ ಹೊರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.