ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 12ರ ಮೊದಲ ಗ್ರ್ಯಾಂಡ್ ಫಿನಾಲೆ ವಾರದಲ್ಲಿ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ ಸ್ಪರ್ಧಿಗಳಾದ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್.ಎನ್ ಅವರು ಮನೆಯಿಂದ ಹೊರಬಿದ್ದಿದ್ದಾರೆ.
ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಪುರುಷರು ಮನೆ ಪ್ರವೇಶ ಮಾಡಿರುವುದನ್ನು ತೋರಿಸಲಾಗಿದೆ. ಆದರೆ, ಆ ಸ್ಪರ್ಧಿಗಳು ಯಾರೆಂಬುದನ್ನು ಗುಟ್ಟಾಗಿ ಇಡಲಾಗಿದೆ.
ಮೂವರು ಸ್ಪರ್ಧಿಗಳನ್ನು ನಟ, ನಿರೂಪಕ ಸುದೀಪ್ ಅವರು ಸ್ವಾಗತಿಸಿದ್ದಾರೆ. ಮನೆಯಲ್ಲಿದ್ದವರಿಗೆ ಅತ್ಯುತ್ತಮ ಸ್ಪರ್ಧೆ ಕೊಡುವುದಾಗಿ ಅವರು ತಿಳಿಸಿದ್ದಾರೆ.
ಸ್ಪರ್ಧಿಗಳ ಹೆಸರನ್ನು ಬಿಗ್ಬಾಸ್ ರಹಸ್ಯವಾಗಿ ಇಟ್ಟಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾರೆಂಬುವುದನ್ನು ನೆಟ್ಟಿಗರು ಊಹಿಸಿದ್ದಾರೆ. ‘ಕ್ರೇಜಿ ಕೀರ್ತಿ’, 'ಆಸ್ಟಿನ್ನ ಮಹಾನ್ ಮೌನ’ ಚಿತ್ರದ ನಟಿ ರಿಷಾ ಗೌಡ, ಫಿಟ್ನೆಸ್ ಮಾಡೆಲ್, ಬಾಡಿ ಬಿಲ್ಡರ್ ಸೂರಜ್ ಸಿಂಗ್ ಮತ್ತು ‘ಕ್ವಾಟ್ಲೆ ಕಿಚನ್’ ಖ್ಯಾತಿಯ ರಾಘು ಅವರು ಮನೆಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಅದಾಗ್ಯೂ, ಇಂದಿನ ಎಪಿಸೋಡ್ನಲ್ಲಿ ಸ್ಪರ್ಧಿಗಳ್ಯಾರು ಎಂಬುದು ತಿಳಿಯಲಿದೆ.
ಮೊದಲ ಫಿನಾಲೆಯಲ್ಲಿ ಫೈನಲಿಸ್ಟ್ಗಳಾಗಿದ್ದ ನಾಲ್ವರಲ್ಲಿ ಕಾಕ್ರೋಚ್ ಸುಧಿ ಅವರನ್ನು ವಿಜೇತರೆಂದು ಸುದೀಪ್ ಘೋಷಿಸಿದ್ದಾರೆ. ಆ ಮೂಲಕ ಸುಧಿ ಅವರು ಮನೆಯಲ್ಲಿ ವಿಶೇಷ ಅಧಿಕಾರವನ್ನು ಪಡೆದುಕೊಂಡಿದ್ದಾರೆ.
ಬಿಗ್ಬಾಸ್ ಆರಂಭವಾಗಿ ಮೂರು ವಾರಗಳಲ್ಲಿ ಒಟ್ಟು ಐದು ಸ್ಪರ್ಧಿಗಳು ಎಲಿಮಿನೆಟ್ ಆಗಿದ್ದಾರೆ. ಮೊದಲ ವಾರ ಕರಿಬಸಪ್ಪ ಹುಳಿಯಾರ್, ಅಮಿತ್ ಪವಾರ್ ಅವರು ಮನೆಯಿಂದ ಹೊರ ನಡೆದಿದ್ದರು. ಮಿಡ್ ವೀಕ್ ಎಲಿಮಿನೇಶನ್ನಲ್ಲಿ ಡಾಗ್ ಸತೀಶ್ ಅವರು, ಮೊದಲ ಗ್ರ್ಯಾಂಡ್ ಫಿನಾಲೆ ವಾರದಲ್ಲಿ ಮಂಜು ಭಾಷಿಣಿ ಮತ್ತು ಅಶ್ವಿನಿ ಎಸ್.ಎನ್ ಅವರು ಎಲಿಮಿನೇಟ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.