
ಗಿಲ್ಲಿ ನಟ
ಚಿತ್ರ: ಇನ್ಸ್ಟಾಗ್ರಾಂ
ಕನ್ನಡದ ಬಿಗ್ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ, ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಗಿಲ್ಲಿ ನಟ ಅವರು ಭಾವನಾತ್ಮಕ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ವಿಜೇತರಾದ ಗಿಲ್ಲಿ ನಟ ಅವರನ್ನು ಹುಟ್ಟೂರಿನಲ್ಲಿ ಮೆರವಣಿಗೆ ಮೂಲಕ ಗ್ರಾಮಸ್ಥರು ಸ್ವಾಗತಿಸಿದ್ದರು. ಆ ಬಳಿಕ ಮಾಧ್ಯಮಗಳಿಗೆ ಗಿಲ್ಲಿ ಸಂದರ್ಶನ ನೀಡಿದ್ದರು. ಈಗ ತಮ್ಮನ್ನು ಬೆಂಬಲಿಸಿದ ಇಡೀ ಕರ್ನಾಟಕದ ಜನತೆಗೆ ವಿಡಿಯೊ ಮೂಲಕ ಕೃತಜ್ಞತೆ ಹೇಳಿದ ಗಿಲ್ಲಿ, ಹೊಸ ಹೆಜ್ಜೆ ಬಗ್ಗೆ ಘೋಷಣೆ ಮಾಡಿದ್ದಾರೆ.
ವಿಡಿಯೊದಲ್ಲಿ ಗಿಲ್ಲಿ ನಟ ಹೇಳಿದ್ದೇನು?
‘ನಿಜವಾಗಲೂ ಕನ್ನಡ ಜನತೆಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ. ನನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಬಿಗ್ ಬಾಸ್ ಮನೆಯಲ್ಲಿರುವಾಗ ಜನರಿಂದ ಇಷ್ಟೊಂದು ಬೆಂಬಲ ಸಿಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಟ್ಯಾಟೂ ಹಾಕಿಸಿಕೊಂಡವರಿಗೆ, ಹರಕೆ ಹೊತ್ತವರಿಗೆ, ಮಾಧ್ಯಮದವರಿಗೆ, ಸಾಮಾಜಿಕ ಮಾಧ್ಯಮದಲ್ಲಿ ನನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ’ ಎಂದಿದ್ದಾರೆ.
ಅದರ ಜೊತೆಗೆ ‘ಇಷ್ಟು ದೂರ ಕರೆದುಕೊಂಡು ಬಂದಿದ್ದೀರಿ. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಿ. ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೀರಿ, ನಿರಂತರವಾಗಿ ಬೆಂಬಲಿಸಿದ್ದೀರಿ. ಇದುವರೆಗೂ ಬರಿ ರನ್ನರ್ ಅಪ್ ಆಗಿಯೇ ಉಳಿದುಕೊಂಡಿದ್ದ ಗಿಲ್ಲಿಗೆ ಗೆಲುವಿನ ಕಿರೀಟ ತೊಡಿಸಿದ್ದೀರಿ. ಮೆರೆಸಿದ್ದೀರಿ. ಈ ಪ್ರೀತಿಗೆ ಏನು ಹೇಳಿದರೂ, ಎಷ್ಟು ಹೇಳಿದರೂ ಕಡಿಮೆಯೇ. ಈ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ ಮಾಡುವ ಹೊತ್ತು’ ಎಂದು ಬರೆದುಕೊಂಡಿದ್ದಾರೆ. ಈ ಕೊನೆಯ ಸಾಲು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸದ್ಯದಲ್ಲೇ ಗಿಲ್ಲಿ ನಟ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.