ADVERTISEMENT

ಗೌರಿ ಕಲ್ಯಾಣ ಧಾರಾವಾಹಿಯಲ್ಲಿ ಟ್ವಿಸ್ಟ್: ದೀನಬಂಧು ಬೇಡಿಕೆ ಒಪ್ಪಿಕೊಳ್ತಾಳಾ ಗೌರಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 7:31 IST
Last Updated 23 ಫೆಬ್ರುವರಿ 2026, 7:31 IST
<div class="paragraphs"><p>ಗೌರಿ (ಶಿಲ್ಪಾ ಕಾಮತ್‌)</p></div>

ಗೌರಿ (ಶಿಲ್ಪಾ ಕಾಮತ್‌)

   

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗೌರಿ ಕಲ್ಯಾಣ’ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಕಲರ್ಸ್‌ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ 12’ ರಿಯಾಲಿಟಿ ಶೋ ಮುಕ್ತಾಯವಾದ ಬೆನ್ನಲ್ಲೇ ಜನವರಿ 27ರಿಂದ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅದರಲ್ಲಿ ಒಂದು ‘ಗೌರಿ ಕಲ್ಯಾಣ’.

ADVERTISEMENT

'ಗೌರಿ ಕಲ್ಯಾಣ' ಧಾರಾವಾಹಿಯಲ್ಲಿ ತನ್ನ ಮೂರು ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆತನಕ್ಕೆ ಸೇರಿಸಬೇಕು ಎಂದು ತನಗೆ ತಾನೇ ಮಾತು ಕೊಟ್ಟುಕೊಂಡಿರುವ ಅಮ್ಮನ ಕಥೆಯಾಗಿದೆ. ಈ ಧಾರಾವಾಹಿ ಕಥೆ ಹಾಗೂ ಉತ್ತಮ ಗುಣಮಟ್ಟದ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ.

ಮಧ್ಯಮ ವರ್ಗದ, ಸಂಪ್ರದಾಯಸ್ಥ ಮನೆತನದ ಗೃಹಿಣಿ ಕಾಂತಲಕ್ಷ್ಮಿಗೆ ಮೂವರು ಹೆಣ್ಣುಮಕ್ಕಳು. ಮೋನಿಕಾ, ಗೌರಿ ಮತ್ತು ಚಿನ್ಮಯಿ. ತನ್ನ ಮೂರೂ ಮಕ್ಕಳನ್ನು ಶ್ರೀಮಂತ ಕುಟುಂಬಗಳಿಗೆ ಸೊಸೆಯರನ್ನಾಗಿ ಕಳಿಸಬೇಕು ಎಂಬ ಮಹದಾಸೆ ಕಾಂತಲಕ್ಷ್ಮಿಯದ್ದು. ಬಡತನದಲ್ಲಿ ತಾನು ಅನುಭವಿಸಿದ ಕಷ್ಟ ತನ್ನ ಮಕ್ಕಳು ಅನುಭವಿಸಬಾರದು ಎಂದು ಹಂಬಲಿಸುವ ಆ ತಾಯಿಗೆ, ತನ್ನ ಮಕ್ಕಳ ಸುಂದರ ಭವಿಷ್ಯದ್ದೇ ಚಿಂತೆ. ದೀನಬಂಧು ಮನತನದ ಶ್ರೀಮಂತಿಕೆಗೆ ಮರುಳಾಗಿ ಕಾಂತಲಕ್ಷ್ಮಿ ತನ್ನ ದೊಡ್ಡ ಮಗಳು ಮೋನಿಕಾಳನ್ನು ಆ ಮನೆಗೆ ಸೊಸೆಯಾಗಿಸಲು ಹಂಬಲಿಸುತ್ತಿದ್ದಾಳೆ. ಅದಕ್ಕಾಗಿ ಪರಿಪರಿಯಾದ ಪ್ರಯತ್ನ ಮಾಡುತ್ತಿದ್ದಾಳೆ.

ಗಂಡ (ಶಾಂತವೀರಣ್ಣ) ಮತ್ತು ಮತ್ತಿಬ್ಬರು ಹೆಣ್ಣುಮಕ್ಕಳ (ಗೌರಿ ಮತ್ತು ಚಿನ್ಮಯಿ) ತೀವ್ರ ವಿರೋಧದ ನಡುವೆಯೂ ತಮ್ಮದು ಶ್ರೀಮಂತ ಕುಟುಂಬ ಎಂದು ಸುಳ್ಳಿನ ಕಥೆ ಕಟ್ಟಿರುವ ಕಾಂತಲಕ್ಷ್ಮಿ, ದೀನಬಂಧು ಕುಟುಂಬದೊಂದಿಗೆ ಸಂಬಂಧ ಬೆಳೆಸಲು ಮುಂದಾಗಿದ್ದಾಳೆ. ಹಲವು ವಿಘ್ನಗಳ ನಡುವೆಯು ಮೋನಿಕಾ ಹಾಗೂ ದೀನಬಂಧು ಕುಟುಂಬದ ವಿವೇಕ್‌ ಚಕ್ರವರ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾಳೆ. ಆದರೆ, ಮೋನಿಕಾಳ ತಂಗಿ ಗೌರಿ ಹಾಗೂ ವಿವೇಕ್‌ ಅವರದ್ದು ಹಾವು-ಮುಂಗುಸಿಯಂತಹ ಕಿತ್ತಾಟ. ಒಬ್ಬರನ್ನು ಕಂಡರೆ ಒಬ್ಬರು ಬೆಂಕಿ ಉಗುಳುತ್ತಿದ್ದಾರೆ. ಗೌರಿ, ಕಾಂತಲಕ್ಷ್ಮಿಯವರ ಕಿರಿಯ ಮಗಳು ಎಂಬ ವಿಚಾರ ದೀನಬಂಧು ಕುಟುಂಬಕ್ಕೆ ಗೊತ್ತಿಲ್ಲ. ವೃತ್ತಿಯಲ್ಲಿ ಕಲಾವಿದೆಯಾಗಿರುವ ಗೌರಿಯು ಮೋನಿಕಾ–ವಿವೇಕ್‌ ನಿಶ್ಚಿತಾರ್ಥದ ವೇಳೆ ಸುಂದರದ ಮಂಟಪ ನಿರ್ಮಿಸಿ ಗಮನ ಸೆಳೆದಿದ್ದಳು. ಆದರೆ, ತನ್ನದಲ್ಲದ ತಪ್ಪಿನಿಂದಾಗಿ ಅವಮಾನ ಅನುಭವಿಸಿದ್ದರು.

ಇದೀಗ ಮೋನಿಕಾ–ವಿವೇಕ್‌ ಮದುವೆಗೆ ಎರಡು ಕುಟುಂಬಗಳು ಭರದಿಂದ ಸಿದ್ಧತೆ ನಡೆಸಿವೆ. ಗೌರಿಯೇ ಮದುವೆ ಮನೆ, ಮಂಟಪದ ಅಲಂಕಾರ ಮಾಡಬೇಕು ಎಂಬುದು ದೀನಬಂಧು ಕುಟುಂಬದ ಬಯಕೆ. ಹಾಗಾಗಿ ಈ ಕುರಿತು ಗೌರಿಯೊಂದಿಗೆ ಮಾತನಾಡುವಂತೆ ವಿವೇಕ್ ಸಹೋದರ ಶ್ಯಾಮ್‌ಗೆ ಸೂಚಿಸಲಾಗಿದೆ. ಗೌರಿಗೆ ಕರೆ ಮಾಡಿದ್ದ ಶ್ಯಾಮ್‌, ಕುಟುಂಬದ ಬಯಕೆಯಂತೆ ಮದುವೆ ಮನೆ, ಮಂಟಪ ಅಲಂಕಾರ ಮಾಡಿಕೊಂಡುವಂತೆ ಕೇಳುತ್ತಾನೆ. ಆದರೆ, ಈ ಪ್ರಾಜೆಕ್ಟ್‌ ಒಪ್ಪಿಕೊಳ್ಳುವುಕ್ಕೆ ಸಾಧ್ಯವಿಲ್ಲ ಎಂದು ಗೌರಿ ನಿರಾಕರಿಸಿದ್ದಾಳೆ.

ಕಲೆ ಎಂಬುದು ವ್ಯಾಪಾರ ವಸ್ತುವಲ್ಲ. ಕಲೆಯೇ ದೇವರೆಂದು ನಂಬಿ ಬದುಕುತ್ತಿರುವ ನಿನ್ನ ಬಗ್ಗೆ ನಮಗೆ ಅಪಾರ ಗೌರವವಿದೆ. ಮೋನಿಕಾ–ವಿವೇಕ್‌ ಮದುವೆಯನ್ನು ನಿನ್ನ ಮನೆ ಮದುವೆ ಎಂದು ಭಾವಿಸಿ ಮದುವೆ ಮನೆ, ಮಂಟಪ ಅಲಂಕಾರ ಮಾಡಿಕೊಂಡುವಂತೆ ಖುದ್ದಾಗಿ ದೀನಬಂಧು ಅವರೇ ಗೌರಿಯನ್ನು ಮನವೊಲಿಸಲು ಮುಂದಾಗಿದ್ದಾರೆ. ಆದರೆ, ಗೌರಿ ಈ ಪ್ರಾಜೆಕ್ಟ್‌ ಒಪ್ಪಿಕೊಳ್ತಾಳಾ ಎಂಬುದು ಕಾದುನೋಡಬೇಕಿದೆ.

‘ಗೌರಿ ಕಲ್ಯಾಣ’ ಧಾರಾವಾಹಿಯಲ್ಲಿ ಗೌರಿಯಾಗಿ ಶಿಲ್ಪಾ ಕಾಮತ್‌, ವಿವೇಕ್‌ ಚಕ್ರವರ್ತಿಯಾಗಿ ಶರತ್‌ ಕುಮಾರ್‌, ಕಾಂತಲಕ್ಷ್ಮಿ ಪಾತ್ರದಲ್ಲಿ ದೀಪಿಕಾ ಶರಣ್‌ ಶೆಟ್ಟಿ, ಶಾಂತವೀರಣ್ಣ ಪಾತ್ರದಲ್ಲಿ ಅಶೋಕ್‌ ಜಂಬೆ, ಮೋನಿಕಾ ಪಾತ್ರದಲ್ಲಿ ಸಹನಾ ಶೆಟ್ಟಿ, ಚಿನ್ಮಯಿ ಪಾತ್ರದಲ್ಲಿ ನಿಹಾರಿಕಾ ಶೆಟ್ಟಿ, ಚಕ್ರವರ್ತಿ ಪಾತ್ರದಲ್ಲಿ ಗುರುದತ್‌, ಸರಿತಾ ಪಾತ್ರದಲ್ಲಿ ಶೀಲಾ, ಚಂಚಲ ಪಾತ್ರದಲ್ಲಿ ಜ್ಯೋತಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.